ಪುತ್ರಿಯ ಅತ್ಯಾಚಾರ ಪ್ರಕರಣದಲ್ಲಿ ತಂದೆ ನಿರ್ದೋಷಿ: ನಾಲ್ಕು ಲಕ್ಷ ರೂ. ನೀಡುವಂತೆ ಮಂಗಳೂರು ಪೊಲೀಸರಿಗೆ ಕೋರ್ಟ್ ಸೂಚನೆ

ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದ ಕಳಪೆ ತನಿಖೆಯಿಂದ ತಿಂಗಳುಗಟ್ಟಲೆ ಜೈಲಿನಲ್ಲಿದ್ದ ಇಬ್ಬರಿಗೆ ತಮ್ಮ ಜೇಬಿನಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಸಿ ಲೋಕೇಶ್ ಮತ್ತು ಅವರ ತಂಡಕ್ಕೆ ಇಲ್ಲಿನ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದ ಕಳಪೆ ತನಿಖೆಯಿಂದ ತಿಂಗಳುಗಟ್ಟಲೆ ಜೈಲಿನಲ್ಲಿದ್ದ ಇಬ್ಬರಿಗೆ ತಮ್ಮ ಜೇಬಿನಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಸಿ ಲೋಕೇಶ್ ಮತ್ತು ಅವರ ತಂಡಕ್ಕೆ ಇಲ್ಲಿನ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.

ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಏಕೈಕ ವ್ಯಕ್ತಿಯಾಗಿದ್ದ ಸಂತ್ರಸ್ತೆಯ ತಂದೆಯನ್ನು ಖುಲಾಸೆಗೊಳಿಸುವಾಗ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ಪೊಲೀಸ್ ತನಿಖೆಯಲ್ಲಿ ಹಲವಾರು ಗಂಭೀರ ಲೋಪಗಳನ್ನು ಗಮನಿಸಿದ್ದಾರೆ.  ಪ್ರಮುಖವಾಗಿ ಪೊಲೀಸರು ಡಿಎನ್‌ಎ ವರದಿಯನ್ನು ಸ್ವೀಕರಿಸುವ ಮೊದಲೇ ಪ್ರಕರಣದ ಇತರ ಮೂವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

ಸಂತ್ರಸ್ತೆ ಈ ಹಿಂದೆ ಅತ್ಯಾಚಾರ ಆರೋಪ ಮಾಡಿದ್ದ ಸಂದೇಶ್‌ನನ್ನು ತನಿಖಾಧಿಕಾರಿ ಜಾಣತನದಿಂದ ನಿರ್ಲಕ್ಷಿಸಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.  ಡಿಎನ್‌ಎ ಪರೀಕ್ಷೆಗಾಗಿ ಅವನ ರಕ್ತದ ಮಾದರಿಗಳನ್ನು ಸಂಗ್ರಹಿಸದಿರುವುದು ಅವನನ್ನು ರಕ್ಷಿಸುವ ಉದ್ದೇಶವಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ಸಂತ್ರಸ್ತೆ ತನ್ನ ತಂದೆಯೇ ಹೊಣೆಗಾರನೆಂದು ಆರೋಪಿಸುವುದಕ್ಕೂ ಮುನ್ನ  ಆಕೆ ತನ್ನ ಹೇಳಿಕೆಯನ್ನು ಹಲವು ಬಾರಿ ಬದಲಾಯಿಸಿದ್ದಳು.

ವಿಚಾರಣೆಯ ಕೊನೆಯಲ್ಲಿ, ನ್ಯಾಯಾಲಯವು ಡಿಎನ್ಎ ವರದಿಯನ್ನು ಸ್ವೀಕರಿಸಿತು. ಡಿಎನ್‌ಎ ತಜ್ಞರ ಪ್ರಕಾರ, ಸಂತ್ರಸ್ತೆಯ ತಂದೆ ಸೇರಿದಂತೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೂವರು ಆರೋಪಿಗಳಲ್ಲಿ ಯಾರೊಬ್ಬರು ಸಂತ್ರಸ್ತೆಯ ಭ್ರೂಣಕ್ಕೆ ಜೈವಿಕ ತಂದೆ ಅಲ್ಲ ಎಂಬುದು ತಿಳಿಯಿತು.

ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ತನಿಖಾಧಿಕಾರಿ ಸಂತ್ರಸ್ತೆಯ ತಂದೆಯ ವಿರುದ್ಧ ಕುರುಡಾಗಿ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಆದೇಶದಲ್ಲಿ ವಿವರಿಸಿದೆ. ಐಒ ಮತ್ತು ಅವರ ತಂಡವು ನಿಜವಾಗಿಯೂ ತಮ್ಮ ಸ್ವಾರ್ಥಕ್ಕಾಗಿ ಇಂತಹ ಅವ್ಯವಹಾರ ಮಾಡಿದ್ದಾರೆ ಮತ್ತು ಅವರು ಸಮಾಜಕ್ಕೆ ಕಳಂಕವಾಗಿದ್ದಾರೆ ಎಂದು ನ್ಯಾಯಾಧೀಶ  ರಾಧಾಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

ನಿಜವಾದ ಮತ್ತು ಸಂಭವನೀಯ ಅಪರಾಧಿಗಳನ್ನು ರಕ್ಷಿಸುವ ಪ್ರಕ್ರಿಯೆಯಲ್ಲಿ ಮುಗ್ಧ ವ್ಯಕ್ತಿಗಳ ನೋವಿಗೆ ಅವರು ಜವಾಬ್ದಾರರಾಗಿರುತ್ತಾರೆ. ಅತ್ಯಾಚಾರ ಸಂತ್ರಸ್ತೆಯ ತಂದೆ ಮತ್ತು ದೈನಂದಿನ ಕೂಲಿಕಾರರು  ತನಿಖಾಧಿಕಾರಿಯಿಂದಾಗಿ ನಿಜವಾದ ಬಲಿಪಶುಗಳಿಗಾಗಿದ್ದಾರೆ. ಅವರನ್ನು ಕ್ರಮವಾಗಿ 8 ತಿಂಗಳು ಮತ್ತು ಎರಡು ತಿಂಗಳು ಜೈಲಿನಲ್ಲಿ ಇರಿಸಲಾಗಿತ್ತು.

ಸಂತ್ರಸ್ತೆಯ ತಂದೆಗೆ 4 ಲಕ್ಷ ಹಾಗೂ ಪ್ರಸಾದ್‌ಗೆ 1 ಲಕ್ಷ ರೂಪಾಯಿ ಪರಿಹಾರವನ್ನು 40 ದಿನಗಳಲ್ಲಿ ಪಾವತಿಸುವ ಮೂಲಕ ಅನ್ಯಾಯವನ್ನು ಸರಿದೂಗಿಸಲು ಐಒ ಮತ್ತು ಅವರ ತಂಡಕ್ಕೆ ತಿಳಿಸಲಾಗಿದೆ. ಇಂತಹ  ಅಕ್ರಮಗಳಲ್ಲಿ ತೊಡಗಿರುವ ಅಧಿಕಾರಿಗಳಿಗೆ ಪಾಠವಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ತನಿಖೆಯ ಲೋಪದೋಷ, ದಾಖಲೆಗಳ ದುರ್ಬಳಕೆ, ಅಧಿಕಾರ ಮತ್ತು ಸ್ಥಾನದ ದುರ್ಬಳಕೆಗೆ ಐಒ ಮತ್ತು ಅವರ ತಂಡವನ್ನು ಹೊಣೆಗಾರರನ್ನಾಗಿ ಮಾಡಿದ ನ್ಯಾಯಾಧೀಶರು, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮಕ್ಕಾಗಿ ಗೃಹ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತೀರ್ಪಿನ ಪ್ರತಿಯನ್ನು ರವಾನಿಸಲು ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com