ಮಂಡ್ಯ: ಇನ್ಸ್ಪೆಕ್ಟರ್ ಆಗಿದ್ದ ತಂದೆ ವರ್ಗಾವಣೆಯಾಗಿ ತೆರಳುವಾಗ ತಮ್ಮ ಹುದ್ದೆಯ ಉಸ್ತುವಾರಿಯನ್ನು ತಮ್ಮ ಪುತ್ರಿಗೆ ವಹಿಸಿದ್ದಾರೆ. ಮಗಳಿಗೆ ಹೂ ಗುಚ್ಛ ನೀಡಿ ಸೀಟ್ನಲ್ಲಿ ಕೂರಿಸಿದ್ದಾರೆ. ನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಿಬ್ಬಂದಿ ಅಪರೂಪದ ಈ ಭಾವುಕತೆಯ ಕ್ಷಣಕ್ಕೆ ಸಾಕ್ಷಿಯಾದರು.
ಸಬ್ ಇನ್ಸ್ಪೆಕ್ಟರ್ ಆಗಿದ್ದ ಬಿಎಸ್ ವೆಂಕಟೇಶ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ವರ್ಗಾವಣೆಯಾಗಿದ್ದು, ಆ ಸ್ಥಾನಕ್ಕೆ ಅವರ ಮಗಳು ಬಿ.ವಿ. ವರ್ಷಾ ನೇಮಕವಾಗಿದ್ದಾರೆ. ವೆಂಕಟೇಶ್ ಅವರು ಮಂಗಳವಾರ ತಮ್ಮ ಪುತ್ರಿಗೆ ಅಧಿಕಾರ ಹಸ್ತಾಂತರಿಸಿದರು.
ಅರ್ಥಶಾಸ್ತ್ರ ಪದವೀಧರೆಯಾಗಿರುವ ಬಿ.ವಿ. ವರ್ಷಾ 2022ರ ಬ್ಯಾಚಿನಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. ನಂತರ ಕಲಬುರಗಿಯಲ್ಲಿ ಪೊಲೀಸ್ ತರಬೇತಿ ಮುಗಿಸಿ ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾ ಪಟ್ಟಣ ಠಾಣೆಗಳಲ್ಲಿ ತರಬೇತಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ತೊರೆ ಬೊಮ್ಮನಹಳ್ಳಿಯ ವೆಂಕಟೇಶ್, 1999 ರಿಂದ 2006ರವರೆಗೂ ಭಾರತೀಯ ಸೇವೆಯಲ್ಲಿ ಸೇವೆ ಸಲ್ಲಿಸಿದ್ದು, 16 ವರ್ಷಗಳ ಕಾಲ ಚೀನಾ, ಪಾಕಿಸ್ತಾನ ಗಡಿಯಲ್ಲಿ ಕೆಲಸ ಮಾಡಿದ್ದಾರೆ. ನಿವೃತ್ತಿ ನಂತರ 2010ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು.
Advertisement