ನಾವು ಶಿವಾಜಿ, ರಾಣಾ ಪ್ರತಾಪ್, ಸಾವರ್ಕರ್ ವಂಶಸ್ಥರು, ನಾನು ಭಗತಸಿಂಗ್ ಹೆಸರು ಹೇಳಿಕೊಂಡು ಬಂದವನು, ನನ್ನನ್ನ ಜೈಲಿಗೆ ಹಾಕುತ್ತೀರಾ: ಚಕ್ರವರ್ತಿ ಸೂಲಿಬೆಲೆ

ರಾಜ್ಯ ಸರ್ಕಾರದ ಶಾಲಾ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯ ನಾಯಕರ ಹೇಳಿಕೆಗಳಿಂದ ವಿವಾದ ರೂಪ ಪಡೆದಿದೆ.
ಚಕ್ರವರ್ತಿ ಸೂಲಿಬೆಲೆ-ಸಚಿವ ಎಂ ಬಿ ಪಾಟೀಲ್
ಚಕ್ರವರ್ತಿ ಸೂಲಿಬೆಲೆ-ಸಚಿವ ಎಂ ಬಿ ಪಾಟೀಲ್

ವಿಜಯಪುರ: ರಾಜ್ಯ ಸರ್ಕಾರದ ಶಾಲಾ ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯ ನಾಯಕರ ಹೇಳಿಕೆಗಳಿಂದ ವಿವಾದ ರೂಪ ಪಡೆದಿದೆ.

ಪಠ್ಯ ಪುಸ್ತಕದ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದ ಮಾತಿಗೆ ತಿರುಗೇಟು ನೀಡಿರುವ ಚಕ್ರವರ್ತಿ ಸೂಲಿಬೆಲೆ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಸಂಜೆ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಗೋ ಸಮಾವೇಶದಲ್ಲಿ ಮಾತನಾಡಿರುವ ಚಕ್ರವರ್ತಿ ಸೂಲಿಬೆಲೆ, ನೀವು ಆಯ್ಕೆ ಮಾಡಿರುವ ಶಾಸಕರೊಬ್ಬರು ಚಕ್ರವರ್ತಿ ಸೂಲಿಬೆಲೆನಾ ಜೈಲಿಗೆ ಹಾಕುತ್ತೇನೆ ಎಂದು ಹೇಳುತ್ತಾರೆ. ಅಯ್ಯೋ ಪುಣಾತ್ಮ ನಾವು ಶಿವಾಜಿಯ ವಂಶಸ್ಥರು, ನಾನು ರಾಣಾ ಪ್ರತಾಪರ ವಂಶಸ್ಥ, ನಾನು ಸಾವರ್ಕರ್ ವಂಶಸ್ಥ. ನಾನು ಭಗತಸಿಂಗ್ ಹೆಸರು ಹೇಳಿಕೊಂಡು ಬಂದವನು. ನನ್ನನ್ನ ಒಳಗೆ ಹಾಕುತ್ತೀರಾ ಎಂದು ಪ್ರಶ್ನೆ ಮಾಡಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಪಶುಸಂಗೋಪನಾ ಸಚಿವರು ಹಸು ಕಡಿಯುವ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಟೀಕಿಸಿದ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯದಲ್ಲಿ ಹಿಟ್ಲರ್ ಆಡಳಿತವಿದೆ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎಂಬಿ ಪಾಟೀಲರು, ಈ ಹಿಂದೆ ಹಿಜಾಬ್, ಹಲಾಲ್ ವಿಚಾರದಲ್ಲಿ ಗಲಾಟೆ ಮಾಡಿದಂತೆ ಈಗ ಏನಾದರೂ ಗಲಾಟೆ ಮಾಡಿದರೆ ಜೈಲಿಗೆ ಹಾಕುತ್ತೇವೆ ಅಂತ ಎಚ್ಚರಿಕೆ ನೀಡಿದ್ದರು.

ಎಂಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಚಕ್ರವರ್ತಿ ಸೂಲಿಬೆಲೆ, ಜೈಲಿಗೆ ಹಾಕಿಸುವಂತಹ ತಪ್ಪು ನನ್ನಿಂದ ಏನಾಗಿದೆ ಅಂತ ಪ್ರಶ್ನಿಸಿದ್ದರು. ಅಸಲು ಸಂಗತಿಯೇನೆಂದರೆ ಅಧಿಕಾರದಲ್ಲಿರುವವರಿಗೆ ಅವರಿಗೆ ಸಹ್ಯವಾಗದ ಸತ್ಯಗಳನ್ನು ಮಾತಾಡಿದರೆ, ಆಡಳಿತದಲ್ಲಿನ ಅಪಸವ್ಯಗಳನ್ನು ಎತ್ತಿತೋರಿದರೆ ಪಥ್ಯವಾಗದು, ಅಧಿಕಾರ ತಮ್ಮ ಕೈಯಲ್ಲಿದೆ ಅನ್ನೋ ಕಾರಣಕ್ಕೆ ನಾಲಗೆಯನ್ನು ಬೇಕಾಬಿಟ್ಟಿ ಹರಿಬಿಡುತ್ತಾರೆ ಎಂದು ಸೂಲಿಬೆಲೆ ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com