ಕನ್ನಡ ಹೋರಾಟಗಾರರು, ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ಸಂಪುಟ ಉಪ ಸಮಿತಿ ರಚನೆ: ಎಚ್.ಕೆ ಪಾಟೀಲ್

ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯ ಮಂಡಳಿಗಳ ತೀರ್ಪು ಹಾಗೂ ಕಾನೂನುಬಾಹಿರವಾಗಿ ಅಮಾಯಕರ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣಗಳ ಪರಿಶೀಲಿಸಿ, ಹಿಂಪಡೆಯಲು ಸಂಪುಟ ಉಪ ಸಮಿತಿ ರಚಿಸಲು ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್

ಬೆಂಗಳೂರು: ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯ ಮಂಡಳಿಗಳ ತೀರ್ಪು ಹಾಗೂ ಕಾನೂನುಬಾಹಿರವಾಗಿ ಅಮಾಯಕರ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣಗಳ ಪರಿಶೀಲಿಸಿ, ಹಿಂಪಡೆಯಲು ಸಂಪುಟ ಉಪ ಸಮಿತಿ ರಚಿಸಲು ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳಿವೆ. ಹಲವು ರೈತರು, ಕನ್ನಡ ಪರ ಸಂಘಟನೆಗಳು ಹಾಗೂ ಇತರರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. “ಪೊಲೀಸರು ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ, ಅದನ್ನು ಹಿಂಪಡೆಯಬೇಕು ಎಂದು ಸಂಘಟನೆಯ ಮುಖ್ಯಸ್ಥರು ಮತ್ತು ವ್ಯಕ್ತಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಕರಣಗಳ ಮರುಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗುವುದು,'' ಎಂದು ಹೇಳಿದರು.

ದಾಖಲಾದ ಪ್ರಕರಣಗಳ ಅವಧಿಯನ್ನು ಅವರು ನಿರ್ಧರಿಸಿಲ್ಲ ಎಂದು ಸಚಿವರು ಹೇಳಿದರು. ಉಪಸಮಿತಿ ಸದಸ್ಯರು ನಿರಪರಾಧಿಗಳೆಂದು ಕಂಡುಬಂದರೆ, ಅವರು ಪ್ರಕರಣಗಳನ್ನು ಕೈಬಿಡುತ್ತಾರೆ' ಎಂದು ಅವರು ಹೇಳಿದರು.

ಕೃಷ್ಣಾ, ಕಾವೇರಿ, ಮಹದಾಯಿ ಇತರೆ ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ವಿವಿಧ ನ್ಯಾಯ ಮಂಡಳಿಗಳ ತೀರ್ಪುಗಳ ಅನುಷ್ಠಾನ ಮತ್ತು ರೂಪುರೇಷೆ ಸಿದ್ಧಪಡಿಸಲು ಜಲಸಂಪನ್ಮೂಲ ಸಚಿವಾಲಯದ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಸಚಿವ ಸಂಪುಟ ಉಪ ಸಮಿತಿ ರಚಿಸಲು ನಿರ್ಧಾರ.

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕನ್ನಡ ಪರ ಹೋರಾಟಗಾರರು, ರೈತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದನ್ನು ಆಧರಿಸಿ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಪರಿಶೀಲಿಸಲು ಸಚಿವ ಸಂಪುಟದ ಉಪ ಸಮಿತಿ ರಚಿಸಲು ನಿರ್ಣಯ ಮಾಡಲಾಗಿದೆ. ಸಮಿತಿ ರಚನೆಯ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ.

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2023 ಮಂಡಿಸಲು ಅನುಮೋದನೆ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಟೆಂಡರ್‌ ಮೂಲಕ ವಹಿಸಲಾದ ಕಾಮಗಾರಿಗಳ ಮೊತ್ತದ ಮಿತಿಯನ್ನು 50 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿಗೆ ಹೆಚ್ಚಿಸಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧಿನಿಯಮಕ್ಕೆ (ಕೆಟಿಪಿಪಿ) ತಿದ್ದುಪಡಿ ಮಾಡಲು ಸಂಪುಟವು ಒಪ್ಪಿಗೆ ನೀಡಿದೆ.

ಹೂಡಿಕೆದಾರರ ಬೃಹತ್ ಹೂಡಿಕೆಗಳನ್ನು ಪರಿಶೀಲಿಸಲು ಮತ್ತೊಂದು ಕ್ಯಾಬಿನೆಟ್ ಉಪಸಮಿತಿಗೆ ಸಂಪುಟ ಅನುಮೋದನೆ ನೀಡಿದೆ. ಸದ್ಯ ಇದಕ್ಕಾಗಿ ಉನ್ನತ ಮಟ್ಟದ ಸಮಿತಿ ಇದೆ. ಈ ಉಪಸಮಿತಿಗೆ ಸದಸ್ಯರನ್ನು ನೇಮಿಸುವ ಅಧಿಕಾರ ಸಿಎಂಗೆ ಇರುತ್ತದೆ, ಇದು ಹೂಡಿಕೆಗಳನ್ನು ಮಾತ್ರ ಪರಿಶೀಲಿಸುತ್ತದೆ ಎಂದು ಪಾಟೀಲ್ ಹೇಳಿದರು. ಇದು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಹೂಡಿಕೆದಾರರನ್ನು ಉತ್ತೇಜಿಸುವುದು.

ಜುಲೈ 14 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಾಧ್ಯತೆ
ಗೃಹಲಕ್ಷ್ಮಿ ಯೋಜನೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಆದಷ್ಟು ಬೇಗ ಸಂಬಂಧಪಟ್ಟ ಸಚಿವರು ವಿವರ ನೀಡಲಿದ್ದಾರೆ ಎಂದು ಸಚಿವ ಪಾಟೀಲ್ ಹೇಳಿದರು. "ಯೋಜನೆಯನ್ನು ಪ್ರಾರಂಭಿಸಲು ಜುಲೈ 14 ತಾತ್ಕಾಲಿಕ ದಿನಾಂಕ ವಾಗಿದೆ ಎಂದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com