'ಕರ್ನಾಟಕ ಸಂಭ್ರಮ-50'ಗೆ ಸಿಎಂ ಸಿದ್ದರಾಮಯ್ಯ ಹಂಪಿಯಲ್ಲಿ ಚಾಲನೆ: ವರ್ಷವಿಡೀ ರಾಜ್ಯಾದ್ಯಂತ ಕನ್ನಡ ರಥಯಾತ್ರೆ ಸಂಚಾರ

ಕರ್ನಾಟಕ ‌ಸಂಭ್ರಮ 50 ರ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದರು. 
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಪಿಯಲ್ಲಿ ಆಯೋಜಿಸಿದ್ದ 'ಕರ್ನಾಟಕ ಸಂಭ್ರಮ- 50' ನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಪಿಯಲ್ಲಿ ಆಯೋಜಿಸಿದ್ದ 'ಕರ್ನಾಟಕ ಸಂಭ್ರಮ- 50' ನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು

ಹಂಪಿ(ವಿಜಯನಗರ): ಕರ್ನಾಟಕ ‌ಸಂಭ್ರಮ 50 ರ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಜಯನಗರ ಜಿಲ್ಲೆ ಹೊಸಪೇಟೆಯ ವಿಶ್ವವಿಖ್ಯಾತ ಹಂಪಿಯಲ್ಲಿ ನಿನ್ನೆ ಗುರುವಾರ ಆಯೋಜಿಸಿದ್ದ "ಕರ್ನಾಟಕ ಸಂಭ್ರಮ- 50" ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಜ್ಯೋತಿಯನ್ನು ಬೆಳಗಿ ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿದರು. ವರ್ಷವೀಡಿ ರಾಜ್ಯಾದ್ಯಂತ ಸಂಚಾರಿಸುವ ಕನ್ನಡ ರಥಯಾತ್ರೆಗೂ ಚಾಲನೆ ನೀಡಿದರು. ರಥಯಾತ್ರೆಯಲ್ಲಿ ಬಳಸಿರುವ ಕಾಂಗ್ರೆಸ್ ಪಕ್ಷದ ಚಿಹ್ನೆ ಮತ್ತು ಗ್ಯಾರಂಟಿ ಯೋಜನೆಗಳು ಚರ್ಚೆಗೆ ಗ್ರಾಸವಾಗಿವೆ.

ಹಂಪಿಯಿಂದ ಹೊಸಪೇಟೆ, ಕೊಪ್ಪಳ ಮಾರ್ಗವಾಗಿ ಜ್ಯೋತಿ ರಥಯಾತ್ರೆ ಗದಗಕ್ಕೆ ತೆರಳಲಿದ್ದು ಇಂದು ಅಲ್ಲಿ ಕಾರ್ಯಕ್ರಮ ನಡೆಯಲಿದೆ. ಸುವರ್ಣ ಸಂಭ್ರಮ ನೆನಪಿನಲ್ಲಿ 50 ಕನ್ನಡ ಪುಸ್ತಕಗಳ ಬಿಡುಗಡೆ, 50 ಮಹಿಳೆಯರಿಗೆ ಸನ್ಮಾನ ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಹುಟ್ಟೂರು ಸಿದ್ದರಾಮನ ಹುಂಡಿಯ ವೀರ ಮಕ್ಕಳ ಕುಣಿತವನ್ನು ಆಯೋಜಿಸಲಾಗಿತ್ತು. ಈ ವೇಳೆ ನೃತ್ಯಗಾರರಿಗೆ ಸಾಥ್‌ ಕೊಟ್ಟ ಸಿದ್ದರಾಮಯ್ಯ ಸುಮಾರು 3 ನಿಮಿಷಗಳ ಕಾಲ ಕುಣಿದು ತಮ್ಮ ಹುಟ್ಟೂರಿ ಹಿಂದಿನ ದಿನಗಳನ್ನು ನೆನೆದರು. ಮೈಸೂರ ತಂಡದವರು ಪ್ರಸ್ತುತ ಪಡಿಸಿದ ವೀರ ಮಕ್ಕಳ ಕುಣಿತದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿರುವ ವಿಡಿಯೊ ವೈರಲ್ ಆಗಿದೆ.

ಬಸವಣ್ಣನವರ ರೀತಿ ನಾನೂ ಮೌಢ್ಯ ನಂಬುವುದಿಲ್ಲ: ನನಗೆ ಮೌಢ್ಯದಲ್ಲಿ ನಂಬಿಕೆ ಇಲ್ಲ. ಬಸವಣ್ಣನವರೂ ಸೇರಿ ಶರಣರು ಮೌಢ್ಯದ ವಿರುದ್ಧ ಹೋರಾಡಿ, ಜಾಗೃತಿ ಮೂಡಿಸಿದ್ದರು. ನಾನೂ ಕೂಡ ಮೌಢ್ಯವನ್ನು ಧಿಕ್ಕರಿಸಿ ಈ ನಾಡಿನ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ. ದೇವರಲ್ಲಿ, ದೇವರು ಎನ್ನುವ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ ಎಂದು ಸ್ಪಷ್ಟಪಡಿಸಿದರು.

ಕನ್ನಡ ಬದುಕನ್ನು ಉನ್ನತೀಕರಿಸುವ ಆಶಯದಿಂದ ಏಕೀಕರಣ ಚಳವಳಿ ನಡೆದು ಹಲವರ ಪ್ರಾಣ ತ್ಯಾಗವನ್ನೂ ಪಡೆದು ವಿಶಾಲ ಕನ್ನಡ ನಾಡು ಉದಯವಾಗಿದೆ. ಕರ್ನಾಟಕ ನಾಮಕರಣಗೊಂಡು 50 ನೇ ವರ್ಷಕ್ಕೆ ಬಿಜೆಪಿ ಇಡೀ ವರ್ಷ ಕನ್ನಡ ಸಂಭ್ರಮವನ್ನು ಆಚರಿಸಬೇಕಿತ್ತು. ಅವರು ಆಚರಿಸಲಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಮೊದಲ ಬಜೆಟ್ ನಲ್ಲೇ "ಕನ್ನಡ ಸಂಭ್ರಮ-50" ನ್ನು ಘೋಷಿಸಿದೆ. ನಾವು ಕರ್ತವ್ಯಲೋಪ ಮಾಡಲಿಲ್ಲ ಎಂದರು.

ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿ ಆಗಲು ರಾಜ್ಯಾದ್ಯಂತ ಸುತ್ತಾಡಿದೆ. ಎಲ್ಲಾ ಕಚೇರಿಗಳಿಗೆ ಕನ್ನಡ ಟೈಪಿಂಗ್ ಯಂತ್ರವನ್ನು ನೀಡಿ ಐಎಎಸ್ ಅಧಿಕಾರಿಗಳೂ ಕೂಡ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸಲು ಪ್ರೇರಣೆ ನೀಡಿದ್ದೆ ಎಂದು ಸ್ಮರಿಸಿದರು.

ಕನ್ನಡದಲ್ಲೇ ವ್ಯವಹರಿಸಿರಿ: ಇತರೆ ಭಾಷೆಗಳನ್ನು ಕಲಿಯಿರಿ, ಗೌರವಿಸಿರಿ. ಆದರೆ ಕನ್ನಡದಲ್ಲೇ ವ್ಯವಹರಿಸಿರಿ ಎಂದು ಕರೆ ನೀಡಿ ಕನ್ನಡ ಜ್ಯೋತಿಯನ್ನು ರಾಜ್ಯಾದ್ಯಂತ ಸಂಭ್ರಮದಿಂದ ಸ್ವಾಗತಿಸಿ ಎಂದು ಕರೆ ನೀಡಿದರು. 

ವಿಜಯನಗರ ಅರಸರ ವೈಭವ ಮರಳಿಸುವುದು ಆದ್ಯತೆ: ವಿಜಯನಗರ ಅರಸರ ಕಾಲದ ವೈಭವ ಮತ್ತು ಅಭಿವೃದ್ಧಿ ರಾಜ್ಯದಲ್ಲಿ ಮರಳಿಸುವುದು ನಮ್ಮ ಆಧ್ಯತೆಯಾಗಿದೆ. ಬಸವಣ್ಣನ ನಾಡು ಇದು. ಕಲ್ಯಾಣ ಕರ್ನಾಟಕ ಎಂದು ಕೇವಲ ಹೆಸರಿಟ್ಟರೆ ಸಾಲದು. ನಿಜವಾದ ಅರ್ಥದಲ್ಲಿ ಈ ಭಾಗದ ಜನರು ಕಲ್ಯಾಣ ಕಾಣಬೇಕು ಎನ್ನುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಉದ್ದೇಶದಿಂದಲೇ 371 (ಜೆ) ಜಾರಿ ಮಾಡಿದೆವು. ಮಲ್ಲಿಕಾರ್ಜುನ ಖರ್ಗೆಯವರೂ ಸೇರಿ ಹಲವರ ಹೋರಾಟದ ಫಲವಾಗಿ 371 ಜೆ ಜಾರಿಯಾಗಿದೆ. ಇದು ಜಾರಿ ಆಗಿದ್ದರಿಂದ ಈ ಭಾಗಕ್ಕೆ ಹೆಚ್ಚೆಚ್ಚು ಅನುದಾನ ಅವಕಾಶಗಳು ಸೃಷ್ಟಿಯಾಗಿವೆ. ನಾನು ಮುಖ್ಯಮಂತ್ರಿ ಆದ ಬಳಿಕ ಬಾಕಿ ಇದ್ದ ಅನುದಾನದ ಜತೆಗೆ ಹೆಚ್ಚುವರಿಯಾಗಿ ಈ ಭಾಗಕ್ಕೆ 3,000 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com