ಹಾಸನಾಂಬೆ ದರ್ಶನಕ್ಕೆ ನಿಂತಿದ್ದ ಭಕ್ತರಿಗೆ ವಿದ್ಯುತ್ ಶಾಕ್: ನೂಕುನುಗ್ಗಲು ಉಂಟಾಗಿ 10ಕ್ಕೂ ಹೆಚ್ಚು ಮಂದಿಗೆ ಗಾಯ
ಹಾಸನ: ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ದೇಗುಲದ ಸಂತೇಪೇಟೆ ಧರ್ಮ ದರ್ಶನ ಸರದಿ ಸಾಲಿನಲ್ಲಿ ನಿಂತ ಭಕ್ತರಿಗೆ ವಿದ್ಯುತ್ ಶಾಕ್ ತಗುಲಿ ನೂಕುನುಗ್ಗಲಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಸ್ಥಳದಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿಯುಂಟಾದ ಪ್ರಸಂಗ ಇಂದು ಶುಕ್ರವಾರ ನಡೆದಿದೆ.
ವಿದ್ಯುತ್ ಶಾಕ್ ನಿಂದ ಒಬ್ಬರ ಮೇಲೊಬ್ಬರು ಬಿದ್ದು ಅವಘಡವುಂಟಾಗಿ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಇಂದು ಬೆಳಗ್ಗೆ ಹಾಸನಾಂಬೆ ದರ್ಶನ ಮಾಡಲೆಂದು ಸಾಮಾನ್ಯ ಭಕ್ತರು ಧರ್ಮ ದರ್ಶನ ಸಾಲಿನಲ್ಲಿ ನಿಂತಿದ್ದಾಗ ಕಂಬಿಯಲ್ಲಿ ಎರಡು-ಮೂರು ಬಾರಿ ಬಿಟ್ಟು ಬಿಟ್ಟು ಕರೆಂಟ್ ಶಾಕ್ ಹೊಡೆಯಿತು. ಬ್ಯಾರಿಕೇಡ್ ಶಾಕ್ ಗೆ ಬಿದ್ದು ವಿದ್ಯುತ್ ಶಾಕ್ ಹೊಡೆದ ಪೆಟ್ಟಿಗೆ ಒಬ್ಬರ ಮೇಲೊಬ್ಬರು 15-20 ಮಂದಿ ಬಿದ್ದರು.
ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತರು ಚೆಲ್ಲಾಪಿಲ್ಲಿಯಾಗಿ ಬಿದ್ದರು. ಕೆಲವರಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿ ಪ್ರಸನ್ನ ತಿಳಿಸಿದ್ದಾರೆ.
ಎಲ್ಇಡಿ ಗೆ ಸ್ಕ್ರೀನ್ ಅಳವಡಿಕೆ ಮಾಡಲಾಗಿತ್ತು. ಈ ವೇಳೆ ತಂತಿಯಿಂದ ವಿದ್ಯುತ್ ಕಬ್ಬಿಣದ ಬ್ಯಾರಿಕೇಡ್ನಲ್ಲಿ ಸಣ್ಣದಾಗಿ ಹರಿದಿದೆ. ಇಬ್ಬರಿಗೆ ಕರೆಂಟ್ ಶಾಕ್ ಆಯ್ತು. ತಕ್ಷಣ ಸುದ್ದಿ ಹರಡಿತು. ಇದನ್ನು ಕೇಳಿ ಗಾಬರಿಗೊಂಡ ಭಕ್ತಾದಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಮಹಿಳೆಯರು, ವೃದ್ಧರು ಸೇರಿ ಭಯಗೊಂಡು ಓಡಿ ಹೋಗಿದ್ದಾರೆ. ಈ ವೇಳೆ ಕಾಲ್ತುಳಿತ, ತಳ್ಳಾಟ ಉಂಟಾಗಿ ಬಿದ್ದಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಅದರಲ್ಲಿ 8 ಮಂದಿ ಆಘಾತದಿಂದ ಅಸ್ವಸ್ಥರಾಗಿ, ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.