ರೌಡಿ ಶೀಟರ್‌ಗೆ ನೀಡಿದ್ದ ‘ರಾಜ್ಯೋತ್ಸವ ಪ್ರಶಸ್ತಿ’ ವಾಪಸ್: 'ಕೊತ್ವಾಲನ ಶಿಷ್ಯರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ!'

ರೌಡಿ ಶೀಟರ್​ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಸ್ತಿಯನ್ನು ವಾಪಸ್ಸು ಪಡೆಯಲು ಮೈಸೂರು ಜಿಲ್ಲಾಡಳಿತ‌ ಮುಂದಾಗಿದೆ.
ರೌಡಿ ಶೀಟರ್ ಅಶೋಕ್ ಗೆ ರಾಜ್ಯೋತ್ಸವ ಪ್ರಶಸ್ತಿ
ರೌಡಿ ಶೀಟರ್ ಅಶೋಕ್ ಗೆ ರಾಜ್ಯೋತ್ಸವ ಪ್ರಶಸ್ತಿ

ಮೈಸೂರು: ರೌಡಿ ಶೀಟರ್​ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಸ್ತಿಯನ್ನು ವಾಪಸ್ಸು ಪಡೆಯಲು ಮೈಸೂರು ಜಿಲ್ಲಾಡಳಿತ‌ ಮುಂದಾಗಿದೆ.

ಮೈಸೂರಿನ ಲಷ್ಕರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಅಶೋಕ್ ಅವರು ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕೆ ನವೆಂಬರ್1 ರಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ನೀಡಿರುವ ಪ್ರಶಸ್ತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಹೇಳಿದ್ದಾರೆ.

ಮೈಸೂರಿನ ಲಷ್ಕರ್ ಪೊಲೀಸ್‌ ಠಾಣೆಯಲ್ಲಿ ಕಾಂಗ್ರೆಸ್‌ ಮುಖಂಡ ಡಾ. ಕೆ.ಎಂ ಅಶೋಕ್ ವಿರುದ್ಧ ರೌಡಿ ಶೀಟರ್‌ ಪಟ್ಟಿ ತೆರೆಯಲಾಗಿದೆ. ಆದರೆ, ಆತನಿಗೆ ಕನ್ನಡ ರಾಜ್ಯೋತ್ಸವ ದಿನದಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಆತನ ವಿರುದ್ಧ ರೌಡಿ ಶೀಟರ್ ಆರೋಪ ಇರುವ ಬಗ್ಗೆ ವರದಿಯಾದ ಬಳಿಕ, ಪ್ರಶಸ್ತಿಯನ್ನು ವಾಪಸ್ ಪಡೆಯುವುದಾಗಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಅಶೋಕ್ ಕಾಂಗ್ರೆಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮಗ ಇತ್ತೀಚೆಗೆ ಪುಂಡಾಟ ತೋರಿಸಿದ್ದರು. ಆತನ ವರ್ತನೆಯಿಂದಾಗಿ ಅಶೋಕ್ ವಿರುದ್ಧ ರೌಡಿ ಶೀಟರ್ ಎಂದು ಪ್ರಕರಣ ದಾಖಲಾಗಿರುವುದು ತಿಳಿದುಬಂದಿತ್ತು.

ಕೊತ್ವಾಲನ (ಕು)ಖ್ಯಾತ ಶಿಷ್ಯರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ ..ಈತ ರೌಡಿ ಶೀಟರ್ ಎಂಬುದು ಗೊತ್ತಿದ್ದೂ ಸಹ ರಾಜ್ಯೋತ್ಸವ ಕೊಟ್ಟಿದ್ದು ಯಾರ ಒತ್ತಡದ ಮೇರೆಗೆ ಎಂದು ಜಿಲ್ಲಾಡಳಿತ ಬಹಿರಂಗಪಡಿಸಲಿ...ಪ್ರಶಸ್ತಿಯ ಪಾವಿತ್ರ್ಯತೆ ಹಾಳು ಮಾಡಿದ ಜಿಲ್ಲಾಡಳಿತ, ಹಾಗೂ ಕೆಲ ಪಟ್ಟಭದ್ರಹಿತಾಸಕ್ತಿಗಳು 'ಸಾಂಸ್ಕೃತಿಕ ನಗರಿಯನ್ನು' ಅಸಂಸ್ಕೃತರ ತವರೂರಾಗಿ' ಮಾಡುವುದು ಹೊರಟಿರುವುದು ರಾಜ್ಯದ ದುರಂತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com