'ವೃಕ್ಷಮಾತೆ', ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಮತ್ತೆ ಆಸ್ಪತ್ರೆಗೆ ದಾಖಲು, ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿಕೆ

ವೃಕ್ಷಪ್ರೇಮಿ, ಪರಿಸರ ಪ್ರೇಮಿ ಸಾಲಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ವರ್ಗಾಯಿಸಲಾಗಿದೆ. ಸದ್ಯ ವೈದ್ಯರು ತಿಮ್ಮಕ್ಕ ಅವರಿಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
ಸಾಲುಮರದ ತಿಮ್ಮಕ್ಕ(ಸಂಗ್ರಹ ಚಿತ್ರ)
ಸಾಲುಮರದ ತಿಮ್ಮಕ್ಕ(ಸಂಗ್ರಹ ಚಿತ್ರ)

ಬೆಂಗಳೂರು: ವೃಕ್ಷಪ್ರೇಮಿ, ಪರಿಸರ ಪ್ರೇಮಿ ಸಾಲಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ವರ್ಗಾಯಿಸಲಾಗಿದೆ. ಸದ್ಯ ವೈದ್ಯರು ತಿಮ್ಮಕ್ಕ ಅವರಿಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಹಾಸನ ಜಿಲ್ಲೆಯ ಬೇಲೂರಿನ ಸಮೀಪದ ಬಳ್ಳೂರಿನಲ್ಲಿ ವಾಸಿಸುತ್ತಿದ್ದ ಸಾಲುಮರದ ತಿಮ್ಮಕ್ಕನವರ(Saalumarada Thimmakka) ಆರೋಗ್ಯ ಕಳೆದ ಎರಡು ದಿನಗಳಿಂದ ತೀವ್ರ ಹದಗೆಟ್ಟಿತ್ತು. ಅವರಿಗೆ ಉಸಿರಾಟ ಸಮಸ್ಯೆ ಉಂಟಾಗಿತ್ತು. ನಿನ್ನೆ ಮಂಗಳವಾರ ಮಧ್ಯಾಹ್ನ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಅವರನ್ನು ಬಳ್ಳೂರು ಮನೆಯಿಂದ ಆಂಬ್ಯುಲೆನ್ಸ್‌ನಲ್ಲಿ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ: ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಅಪೋಲೋ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ತುಸು ಚೇತರಿಕೆ ಕಂಡು ಬಂದರೂ ವೈದ್ಯರು ಆಸ್ಪತ್ರೆಯಲ್ಲಿ ಇನ್ನಷ್ಟು ದಿನ ನಿಗಾವಹಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್‌ ಬಳ್ಳೂರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. 

ಮನೆಯಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದ ತಿಮ್ಮಕ್ಕ: ಸಾಲುಮರದ ತಿಮ್ಮಕ್ಕ ಅವರು ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ನಿವಾಸದಲ್ಲಿ ಎರಡು ತಿಂಗಳ ಹಿಂದೆ ಕಾಲು ಜಾರಿ ಬಿದ್ದು, ಬೆನ್ನು ಮೂಳೆಗೆ ಪೆಟ್ಟಾಗಿತ್ತು.  ಆ ಸಂದರ್ಭದಲ್ಲಿ ಬೆಂಗಳೂರಿನ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಆಗಾಗ ಅವರ ದೇಹದಲ್ಲಿ ಅನಾರೋಗ್ಯ ಕಾಡುತ್ತಿತ್ತು.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ ತಿಮ್ಮಕ್ಕನವರು ತಮ್ಮ ಕೆಲಸದಿಂದಾಗಿ ಸಾಲುಮರದ ತಿಮ್ಮಕ್ಕ ಎಂದು ಕರೆಯುತ್ತಾರೆ. 40 ವಯಸ್ಸಾದರೂ ಮಕ್ಕಳಾಗದ ಕಾರಣ ತನ್ನ ಪತಿಯೊಂದಿಗೆ ಆಲದ ಮರಗಳನ್ನು ನೆಡಲು ಪ್ರಾರಂಭಿಸಿದರು. 

ತಿಮ್ಮಕ್ಕ ಮತ್ತು ಅವರ ಪತಿ ಇಬ್ಬರೂ ಮೊದಲ ವರ್ಷದಲ್ಲಿ 4 ಕಿಮೀ ಉದ್ದದ ರಸ್ತೆಯ ಎರಡೂ ಬದಿಯಲ್ಲಿ 10 ಆಲದ ಸಸಿಗಳೊಂದಿಗೆ ಪ್ರಾರಂಭಿಸಿದರು. ತಮ್ಮ ಮಕ್ಕಳಂತೆ ಗಿಡಗಳನ್ನು ಆರೈಕೆ ಮಾಡಿದರು. ಪ್ರತಿ ವರ್ಷ, ಈ ಮರಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಇಲ್ಲಿಯವರೆಗೆ, ಅವರು ಮತ್ತು ಅವರ ಪತಿಯಿಂದ 8000 ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. 

ತಿಮ್ಮಕ್ಕ ಅವರು ಔಪಚಾರಿಕ ಶಿಕ್ಷಣವನ್ನು ಪಡೆಯದಿದ್ದರೂ, ಅವರ ಕೆಲಸಕ್ಕೆ ಭಾರತದ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು, ತಿಮ್ಮಕ್ಕನ ಸಂಪನ್ಮೂಲಗಳು ಪರಿಸರ ಶಿಕ್ಷಣಕ್ಕಾಗಿ ಅವರ ಹೆಸರಿನ ಪರಿಸರ ಸಂಸ್ಥೆ ಅಮೆರಿಕದಲ್ಲೂ ಇದೆ. ಸಾಲುಮರದ ತಿಮ್ಮಕ್ಕ ಅವರು ತಮ್ಮ ನಂಬಲಾಗದ ಮತ್ತು ಬೃಹತ್ ಪರಿಸರ ಸೇವೆಗಳ ಮೂಲಕ ಕರ್ನಾಟಕ ರಾಜ್ಯಕ್ಕೆ ವಿಶ್ವಾದ್ಯಂತ ಮನ್ನಣೆಯನ್ನು ತಂದಿದ್ದಾರೆ. ತಿಮ್ಮಕ್ಕ ಅವರಿಗೆ ಈಗ 111 ವರ್ಷ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com