ವಿಧಾನಸೌಧದಲ್ಲಿ 'ಕಾಮಗಾರಿ ಪ್ರಗತಿಯಲ್ಲಿದೆ' ಬೋರ್ಡ್: ಸಚಿವರಿಗೆ ಕೊಠಡಿ ನೀಡಿ 4 ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ ನವೀಕರಣ!

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ, ಆದರೆ ವಿಧಾನಸೌಧದಲ್ಲಿರುವ ಸಚಿವರ ಕಚೇರಿ ನವೀಕರಣ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.
ವಿಧಾನಸೌಧದಲ್ಲಿ ನವೀಕರಣ ಕಾರ್ಯ
ವಿಧಾನಸೌಧದಲ್ಲಿ ನವೀಕರಣ ಕಾರ್ಯ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ, ಆದರೆ ವಿಧಾನಸೌಧದಲ್ಲಿರುವ ಸಚಿವರ ಕಚೇರಿ ನವೀಕರಣ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ವಿಧಾನಸೌಧದಲ್ಲಿರುವ ಸಚಿವರ ಕಚೇರಿಗೆ ಭೇಟಿ ನೀಡುವವರಿಗೆ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಬೋರ್ಡ್‌ಗಳು ಸ್ವಾಗತಿಸುತ್ತಿವೆ. ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕೆಲವು ಸಚಿವರ ಕಚೇರಿಗಳ ನವೀಕರಣ ಇನ್ನೂ ನಡೆಯುತ್ತಿದೆ.

ಫ್ಲೋರ್ ಟೈಲ್ಸ್ ಬದಲಾಯಿಸುವುದು, ಇಂಟಿರೀಯರ್ ಡಿಸೈನ್ ಮಾಡುವುದು, ಪೇಂಟಿಂಗ್ ಮತ್ತು ಹೊಸ ಪೀಠೋಪಕರಣ ಹಾಕುವುದು ನವೀಕರಣ ಕಾರ್ಯದಲ್ಲಿ ಒಳಗೊಂಡಿರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಡಿಕೆ ಶಿವಕುಮಾರ್ ಮತ್ತು ಕೆಲವು ಸಚಿವರು ಮೇ ಎರಡನೇ ವಾರದಲ್ಲಿ ಮತ್ತು ಉಳಿದವರು ಮೇ ಅಂತ್ಯದ ವೇಳೆಗೆ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರದ ಬಳಿಕ ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕಚೇರಿಗಳನ್ನು ಹಂಚಿಕೆ ಮಾಡಲಾಗಿತ್ತು. ಅವರಲ್ಲಿ ಹೆಚ್ಚಿನವರು ಜೂನ್‌ನಲ್ಲಿ ತಮ್ಮ ಕಚೇರಿಗಳಲ್ಲಿ ಕೆಲಸ ಆರಂಭಿಸಿದರು.

ಆದರೆ, ಗಣಿ ಮತ್ತು ಭೂವಿಜ್ಞಾನ ಮತ್ತು ತೋಟಗಾರಿಕಾ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರು ಇನ್ನೂ ತಮ್ಮ ಕಚೇರಿಗೆ ತೆರಳಿಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಅವರಿಗೆ ಮಂಜೂರಾಗಿದ್ದ ಕಚೇರಿ ಜಾಗವನ್ನು ನವೀಕರಿಸಲಾಗುತ್ತಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ಮಲ್ಲಿಕಾರ್ಜುನ್‌ಗೆ ಕೊಠಡಿ ಮಂಜೂರು ಮಾಡಲಾಗಿತ್ತು. ಅವರು ಈಗ ಅದನ್ನು ಖಾಸಗಿ ಗುತ್ತಿಗೆದಾರರಿಂದ ನವೀಕರಿಸುತ್ತಿದ್ದಾರೆ, ಲೋಕೋಪಯೋಗಿ ಇಲಾಖೆ ನವೀಕರಣ ಕಾರ್ಯ ಮಾಡುತ್ತಿಲ್ಲ (PWD) ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ನವೀಕರಣ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಸಚಿವರ ಕಚೇರಿ ಈಗ ಹೊಸ ಇಂಟೀರಿಯರ್ ಮತ್ತು ಪೀಠೋಪಕರಣಗಳಿಂದ ಕಂಗೊಳಿಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. "ಸಚಿವರಿಗೆ ಅವರ ಕೊಠಡಿಗೆ ತೆರಳುವುದು ಈಗ ಅವರಿಗೆ ಬಿಟ್ಟದ್ದು, ಇಲ್ಲಿಯವರೆಗೂ ಸಚಿವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿ ಸಭೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ವಿಧಾನಸೌಧದಲ್ಲಿ (335, 336, 337 ಮತ್ತು 337ಎ) ನಾಲ್ಕು ಕೊಠಡಿಗಳನ್ನು ಮಂಜೂರು ಮಾಡಲಾಗಿದೆ. ಪ್ರಸ್ತುತ, 337A ಕೊಠಡಿಯನ್ನು ಕಾನ್ಫರೆನ್ಸ್ ಹಾಲ್ ಆಗಿ ಪರಿವರ್ತಿಸಲಾಗುತ್ತಿದೆ.

ಸಾಮಾನ್ಯವಾಗಿ ಒಬ್ಬ ಸಚಿವರಿಗೆ ಒಂದು ಅಥವಾ ಎರಡು ಕೊಠಡಿಗಳನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ಶಿವಕುಮಾರ್ ಅವರಿಗೆ ನಾಲ್ಕು ಕೊಠಡಿಗಳನ್ನು ನೀಡಲಾಗಿದ್ದು, ಅದರಲ್ಲಿ ಒಂದನ್ನು ಈಗ ಕಾನ್ಫರೆನ್ಸ್ ಹಾಲ್ ಆಗಿ ಪರಿವರ್ತಿಸಲಾಗುತ್ತಿದೆ. ಮೂರನೇ ಮಹಡಿಯಲ್ಲಿ ಕೆಲವು ಕಾನ್ಫರೆನ್ಸ್ ಹಾಲ್‌ಗಳಿವೆ. ಆದರೆ, ಶಿವಕುಮಾರ್ ತಮಗಾಗಿ ಪ್ರತ್ಯೇಕ ಸಮ್ಮೇಳನ ಸಭಾಂಗಣವನ್ನು ಕೋರಿದ್ದರು.

ಈ ಕಾಮಗಾರಿಯ ಹೊರತಾಗಿ ವಿಧಾನಸೌಧದ ಪ್ರತಿ ಮಹಡಿಯಲ್ಲಿ ಒಂದು ಅಥವಾ ಎರಡು ಕೊಠಡಿಗಳನ್ನು ನವೀಕರಿಸಲಾಗುತ್ತಿದೆ. ಸಚಿವರಿಗೆ ಮಂಜೂರು ಮಾಡಲಾದ ಕೆಲವು ಕೊಠಡಿಗಳು ಅವರ ನಿರ್ದೇಶನದಂತೆ ಪ್ರಮುಖ ನವೀಕರಣ ಕಾರ್ಯವನ್ನು ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com