ರಾಮನಗರ ಜಿಲ್ಲೆಯಲ್ಲಿ ನಾಲ್ಕು ಕೆಪಿಎಸ್ ಶಾಲೆಗಳ ನಿರ್ಮಾಣ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಜ್ಯದಲ್ಲಿ 3,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಶಿಕ್ಷಣ ಕ್ರಾಂತಿಗೆ ಕೆಂಪೇಗೌಡರ ಮಾಗಡಿಯಿಂದ ಚಾಲನೆ ದೊರೆತಿದೆ ಎಂದು ಡಿಸಿಎಂ ಡಿ.ಕೆ,ಶಿವಕುಮಾರ್ ತಿಳಿಸಿದರು,
ಕೆಪಿಎಸ್ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಡಿಕೆ ಶಿವಕುಮಾರ್
ಕೆಪಿಎಸ್ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಡಿಕೆ ಶಿವಕುಮಾರ್

ಮಾಗಡಿ: ರಾಜ್ಯದಲ್ಲಿ 3,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಶಿಕ್ಷಣ ಕ್ರಾಂತಿಗೆ ಕೆಂಪೇಗೌಡರ ಮಾಗಡಿಯಿಂದ ಚಾಲನೆ ದೊರೆತಿದೆ ಎಂದು ಡಿಸಿಎಂ ಡಿ.ಕೆ,ಶಿವಕುಮಾರ್ ಅವರು ಅಭಿಪ್ರಾಯ ಪಟ್ಟರು.

 ಕುದೂರಿನಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು “ನಗರ ಪ್ರದೇಶಗಳಿಗೆ ಶಿಕ್ಷಣಕ್ಕಾಗಿ ವಲಸೆ ಹೋಗುವುದು ತಪ್ಪಬೇಕು. ಪ್ರತಿ ಪಂಚಾಯಿತಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಟ್ಟಬೇಕು ಎಂಬುದು ನನ್ನ ಕನಸಾಗಿದೆ. ಆದಷ್ಟು ಬೇಗ ಇದನ್ನು ಕಾರ್ಯಗತ ಮಾಡಲಿದ್ದೇವೆ” ಎಂದು ಹೇಳಿದರು.

ಕುದೂರಿನಂತಹ ಗ್ರಾಮೀಣ ಭಾಗದಲ್ಲಿ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡಲು ಹೊರಟಿರುವುದು ಕ್ರಾಂತಿಕಾರಿ ಆಲೋಚನೆ. ಇಂತಹ ಸುಸಜ್ಜಿತ ಶಾಲೆ ನಿರ್ಮಾಣ ಮಾಡಲು ಹೊರಟಿರುವ ಟೊಯೋಟೊ ಕಿರ್ಲೋಸ್ಕರ್ ಸಂಸ್ಥೆಗೆ ನಾವೆಲ್ಲಾ ಅಭಾರಿಯಾಗಿರುತ್ತೇವೆ. ಈ ಸಂಸ್ಥೆಯವರು ರಾಮನಗರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಒಂದೊಂದು ಶಾಲೆ ನಿರ್ಮಾಣ ಮಾಡುವುದಾಗಿ ಮಾತುಕೊಟ್ಟಿದ್ದಾರೆ ಎಂದರು.

ರಾಮನಗರ ಜಿಲ್ಲೆಯಲ್ಲಿ ಇರುವ ಎಲ್ಲಾ ಕೈಗಾರಿಕೆಗಳ ಸಿಎಸ್ಆರ್ ಹಣವನ್ನು ಶಿಕ್ಷಣಕ್ಕೆ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸುಮಾರು 36 ಕೋಟಿಯಷ್ಟು ಹಣ ಈಗಾಗಲೇ ಈ  ಅನುದಾನದ ಅಡಿಯಲ್ಲಿ ಬಳಕೆಗೆ ಬಂದಿದೆ ಎಂದು ಹೇಳಿದರು.

ಕಣ್ಣು ಚೆನಾಗಿದ್ದರೆ ನೋಟ ಚೆನ್ನಾಗಿರುತ್ತದೆ. ನಾಲಿಗೆ, ನಡತೆ ಚೆನ್ನಾಗಿದ್ದರೆ ಇಡೀ ಜಗತ್ತೇ ನಮ್ಮನ್ನು ಹಿಂಬಾಲಿಸುತ್ತದೆ, ಇದಕ್ಕೆ ಶಿಕ್ಷಣ ಅತ್ಯಗತ್ಯ. ಸಮಯ ನಿಲ್ಲುವುದಿಲ್ಲ, ಆಡಿದ ಮಾತು ಮತ್ತೆ ಮರಳಿ ಬರುವುದಿಲ್ಲ, ಆದ ಕಾರಣ ವಿದ್ಯೆ ಕಲಿಯುವ ವಯಸ್ಸು ಕಳೆದು ಹೋದರೆ ಮತ್ತೆ ದೊರೆಯುವುದಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟು ಕಲಿಯಬೇಕು. ನಿಮ್ಮ ತಂದೆ- ತಾಯಿ ಕನಸು ಕಂಡಿರುತ್ತಾರೆ, ಆ ಕನಸಿಗೆ ನೀವು ಸಹಕಾರಿಯಾಗಿ ಬೆಳೆಯಬೇಕು If you forget the route, you will not get the Fruit ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀರಂಗ ನೀರಾವರಿ ಯೋಜನೆಗೆ ಮರುಜೀವ:ಜಿಲ್ಲೆಯ ಶ್ರೀರಂಗ ನೀರಾವರಿ ಯೋಜನೆಗೆ ಮತ್ತೆ ಮರುಜೀವ ನೀಡಲಿದ್ದು, ಕೃಷಿ ಹಾಗೂ ಕುಡಿಯುವ ನೀರಿನ ಕೊರತೆಯನ್ನು ಶೀಘ್ರ ಬಗೆಹರಿಸಲಿದ್ದೇವೆ. ಸಂಸದರಾದ ಡಿ.ಕೆ.ಸುರೇಶ್ ಮತ್ತು ಶಾಸಕ ಬಾಲಕೃಷ್ಣ ಅವರು ಕ್ಷೇತ್ರದ ಅನೇಕ ಯೋಜನೆ ಹಾಗೂ ಸಮಸ್ಯೆಗಳ ಗಮನ ಸೆಳೆದಿದ್ದಾರೆ. ಮುಖ್ಯವಾಗಿ ಬಗರ್ಹುಕುಂ ಜಮೀನುಗಳ ಬಗ್ಗೆ ಶೀಘ್ರ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಗೃಹಲಕ್ಷ್ಮೀ ತಾಂತ್ರಿಕ ಸಮಸ್ಯೆ ಶೀಘ್ರ ಪರಿಹಾರ: ಶೇ 88 ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಹಣ ತಲುಪಿದೆ. ಮಿಕ್ಕ ಅರ್ಜಿದಾರರಿಗೆ ಬ್ಯಾಂಕ್ ಖಾತೆ ಸಮಸ್ಯೆಯಿಂದ ಹಣ ತಲುಪಿಲ್ಲ ಈ ಸಮಸ್ಯೆಯನ್ನು ಬೇಗ ಬಗೆಹರಿಸಲಾಗುವುದು. ಬೆಲೆ ಏರಿಕೆಯಿಂದ ನಮ್ಮ ಗ್ರಾಮೀಣ ಪ್ರದೇಶದ ಜನರು ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ವಲ್ಪ ಉಸಿರಾಡುವಂತೆ ಮಾಡಿವೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,58,000 ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಹಣ ತಲುಪಿಸಿದ್ದೇವೆ. ಗೃಹಲಕ್ಷ್ಮೀ ಯೋಜನೆಯ 2,000 ಹಣವನ್ನು ಮಹಿಳೆಯರೇ ನಿಮ್ಮ ಗಂಡಂದಿರಿಗೆ ನೀಡಬೇಡಿ. ಉಳಿತಾಯ ಮಾಡಿ, ಮಕ್ಕಳ ಭವಿಷ್ಯಕ್ಕೆ ಬಳಸಿಕೊಳ್ಳಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com