ಮೈಸೂರು: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ. ಜಯಪ್ರಕಾಶ್ ಹೆಗ್ಡೆ ಅವರು ನವೆಂಬರ್ನಲ್ಲಿ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ. ಅದು ಸಲ್ಲಿಕೆಯಾದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮದು ಜಾತಿ ವ್ಯವಸ್ಥೆ ಆಧಾರಿತ ಸಮಾಜ. ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಕೊಡಬೇಕು. ಅದಕ್ಕೆ ಜಾತಿವಾರು ಅಂಕಿ ಅಂಶಗಳು ಬೇಕು. ಅದಕ್ಕಾಗಿ ನಾವು ಜಾತಿಗಣತಿ ಮಾಡಿಸಿದ್ದೆವು. ಜಾತಿ ಗಣತಿ ಆದಾಗ ಕಾಂತರಾಜ್ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದರು.
ಕಾಂತರಾಜ್ ವರದಿಯನ್ನು ಆಗ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ತೆಗೆದುಕೊಳ್ಳಲಿಲ್ಲ. ಈಗಿನ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ನವೆಂಬರ್ನಲ್ಲಿ ವರದಿ ಕೊಡುತ್ತೇನೆ ಅಂತ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. ʻʻವರದಿ ಸರ್ಕಾರದ ಕೈಸೇರಿದ ಮೇಲೆ ತೀರ್ಮಾನ ಮಾಡುತ್ತೇವೆ ಎಂದರು.
ಸರ್ಕಾರದ ಯೋಜನೆಗಳನ್ನು ಎಲ್ಲ ವರ್ಗಗಳ ಜನರಿಗೆ ತಲುಪಿಸಲು ಜಾತಿ ಮತ್ತು ಸಾಮಾಜಿಕ ಗಣತಿ, ಅದರ ಅಂಕಿ–ಅಂಶಗಳು ಅಗತ್ಯ. ಸಬ್ ಕ ಸಾಥ್ ಸಬ್ಕ ವಿಕಾಸ್ ಎನ್ನುವ ಪ್ರಧಾನಿ ಜಾತಿಗಣತಿಯನ್ನು ವಿರೋಧಿಸುವುದು ಏಕೆ ಎಂದು ಅವರು ಪ್ರಶ್ನಿಸಿದರು.
Advertisement