ಕಾವೇರಿ ಹೋರಾಟ: ಅ.10ರಂದು ಹೊಸಕೋಟೆ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್- ವಾಟಾಳ್ ನಾಗರಾಜ್
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ವಿಚಾರವಾಗಿ ಅಕ್ಟೋಬರ್ 10 ರಂದು ಹೊಸಕೋಟೆ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ತಿಬೆಲೆ ಗಡಿ ಬಂದ್ ನಿರ್ಧಾರದಿಂದ ಹಿಂದೆ ಸರಿದಿದ್ದು, ಮಂಗಳವಾರ ಕನ್ನಡಪರ ಸಂಘಟನೆಗಳಿಂದ ಹೊಸಕೋಟೆ ಟೋಲ್ ಬಳಿಯ ರಾಷ್ಯ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಇತ್ತೀಚಿಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕೆಆರ್ ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲಾಗಿತ್ತು.ಆದರೆ, ಜಲಾಶಯದ ಸಿಎಂ ಸ್ಟಾಲಿನ್ ಭಾವಚಿತ್ರ ಹರಿದು, ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗಿತ್ತು. ಮುಖ್ಯದ್ವಾರದ ಬಳಿಯೇ ಹೋರಾಟಗಾರರನ್ನು ಪೊಲೀಸರು ತಡೆದಿದ್ದರು. ಅಲ್ಲದೇ ವಾಟಾಳ್ ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಕಾವೇರಿ ವಿವಾದ ಬಗೆಹರಿಯುವಲ್ಲಿ ಸಂಸದರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಇತ್ತೀಚಿಗೆ ಕರೆ ನೀಡಿದ್ದ ವಾಟಾಳ್ ನಾಗರಾಜ್, ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಸ್ತಾಪಿಸಿದ್ದರು. ರಾಜಕೀಯ ಆಟಗಳಿಗೆ ಆದ್ಯತೆ ನೀಡುವ ಮೊದಲು ಪರಿಸ್ಥಿತಿಯನ್ನು ನಿರ್ಣಯಿಸಲು ತಂಡವನ್ನು ಕಳುಹಿಸಲು ಸಲಹೆ ನೀಡಿದ್ದರು.
ಎರಡೂ ರಾಜ್ಯಗಳ ಜನರ ಜೀವನೋಪಾಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದ ಈ ಸಮಸ್ಯೆಯನ್ನು ರಾಜಕೀಯ ಕದನವಾಗಿ ಪರಿವರ್ತಿಸಬಾರದು, ಶಾಂತಿಯುತ ಮಾತುಕತೆ ಮೂಲಕ ಪರಿಸ್ಥಿತಿಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದರು. ಸೆಪ್ಟೆಂಬರ್ 29 ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್ ನಡೆಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ