ಮೈಸೂರು ದಸರಾ: ಆಕರ್ಷಕ ಜಂಬೂ ಸವಾರಿ, ಪಂಜಿನ ಕವಾಯತು ನೊಂದಿಗೆ ವರ್ಣರಂಜಿತ ತೆರೆ!

ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಆಕರ್ಷಕ ಪಂಜಿನ ಕವಾಯತಿನೊಂದಿಗೆ ಕಳೆದ 10 ದಿನಗಳಿಂದ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ವರ್ಣರಂಜಿತ ತೆರೆ ಬಿದ್ದಿತು.
ಜಂಬೂ ಸವಾರಿ, ಪಂಜಿನ ಕವಾಯತಿನ ಚಿತ್ರ
ಜಂಬೂ ಸವಾರಿ, ಪಂಜಿನ ಕವಾಯತಿನ ಚಿತ್ರ

ಮೈಸೂರು: ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಆಕರ್ಷಕ ಪಂಜಿನ ಕವಾಯತಿನೊಂದಿಗೆ ಕಳೆದ 10 ದಿನಗಳಿಂದ ನಡೆದ ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ವರ್ಣರಂಜಿತ ತೆರೆ ಬಿದ್ದಿತು.

ನಾಡದೇವತೆ ಚಾಮುಂಡೇಶ್ವರಿ ವಿರಾಜಮಾನಳಾಗಿದ್ದ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಅರಮನೆ ಆವರಣದಿಂದ ಬನ್ನಿಮಂಟಪ ದವರೆಗೂ ಅಭಿಮನ್ಯು ಆನೆ ಯಶಸ್ವಿಯಾಗಿ ಹೊತ್ತು ಸಾಗಿತು. ಇತರ 14 ಗಜಪಡೆಗಳು ಅಭಿಮನ್ಯುವಿಗೆ ಸಾಥ್ ನೀಡಿದವು. ಕರ್ನಾಟಕದ ಅಶ್ವದಳ ಪೊಲೀಸರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ,ರಾಜವಂಶಸ್ಥ  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ನಂದಿಧ್ವಜ ಪೂಜೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಕಲಾತಂಡಗಳು, ಸ್ತಬ್ಧಚಿತ್ರಗಳ ಮರವಣಿಗೆ ಆರಂಭವಾಯಿತು. 

ಅರಮನೆ ಮುಂಭಾಗದಿಂದ ನಡೆದ ಮೆರವಣಿಗೆಯಲ್ಲಿ ರಾಜ್ಯದ 31 ಜಿಲ್ಲೆಗಳು ಮತ್ತು ವಿವಿಧ ಪ್ರಮುಖ ಸರ್ಕಾರಿ ಇಲಾಖೆಗಳ ಭವ್ಯವಾದ ಸ್ತಬ್ಧಚಿತ್ರಗಳು ಆಕರ್ಷಣೀಯವಾಗಿದ್ದವು. ಬಳ್ಳಾರಿ ಜಿಲ್ಲೆ ಹಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ಅಂಶಗಳನ್ನು ಪ್ರದರ್ಶಿಸಿದರೆ, ಬೆಳಗಾವಿ ಜಿಲ್ಲೆ ಐತಿಹಾಸಿಕ ಮಹಾಲಿಂಗೇಶ್ವರ ದೇವಸ್ಥಾನದ ಮಾದರಿಯನ್ನು ಪ್ರದರ್ಶಿಸಿತು.

ಬೆಂಗಳೂರು ನಗರ ಜಿಲ್ಲೆ ಇಸ್ರೋದ ಚಂದ್ರಯಾನ-3 ಸಾಧನೆಯನ್ನು ಪ್ರದರ್ಶಿಸಿತು. ಕೋಲಾರ ಗಾರುಡಿ ನೃತ್ಯವನ್ನು ಪ್ರಸ್ತುತಪಡಿಸಿದರೆ, ಬೀದರ್ ವಿಶಿಷ್ಟ ವನ್ಯಜೀವಿಗಳ ಮೇಲೆ ಕೇಂದ್ರೀಕರಿಸಿತು ಮತ್ತು ಚಾಮರಾಜನಗರ ಪ್ರಸಿದ್ಧ ಮಲೆ ಮಹದೇಶ್ವರ ದೇವಸ್ಥಾನದ ಮಾದರಿಯನ್ನು ಪ್ರದರ್ಶಿಸಿತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ಜೊತೆಗೆ ಸುಗಂಧಭರಿತ ಕಾಫಿಯ ಪ್ರದರ್ಶನವನ್ನು ರಚಿಸಿತು. ಈ 10 ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕುಸ್ತಿ ಕೂಡ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಮೆರವಣಿಗೆಯು ಅರಮನೆಯಿಂದ ಬನ್ನಿಮಂಟಪಕ್ಕೆ ತಲುಪುತ್ತಿದ್ದಂತೆ ಉತ್ಸವ ಮುಕ್ತಾಯವಾಯಿತು.

ಬನ್ನಿಮಂಟಪದ ಮೈದಾನದಲ್ಲಿ ಸಿಎಆರ್, ಡಿಎಆರ್, ಕಮಾಂಡೋ ಪೊಲೀಸ್, ಪೊಲೀಸ್ ಬ್ಯಾಂಡ್, ಅಶ್ವಾರೋಹಿ ದಳ, ಪೊಲೀಸ್ ಪಡೆಗಳಿಂದ ಆಕರ್ಷಕ ಪಥಸಂಚಲನ ನಡೆಸಿದವು. ಬೈಕ್ ಸ್ಟಂಟ್ಸ್, ಕುದುರೆ ಸವಾರಿ, ಪಂಜಿನ ಕವಾಯತು ಟೆಂಟ್ ಪೆಗ್ಗಿಂಗ್, ಲೇಸರ್ ಲೈಟ್ ಸೇರಿ ಅನೇಕ ಸಾಹಸ ಕ್ರೀಡೆಗಳ ಪ್ರದರ್ಶನವಾಯಿತು.

ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ನಡೆದ ಆಕರ್ಷಕ ಪಂಜಿನ ಕವಾಯತು ಮೈನವಿರೇಳಿಸಿತು. ಪಂಜು ಹಿಡಿದು ವಿವಿಧ ಆಕೃತಿ ಮೂಡಿಸಿದರು.ನಂತರ 2023ನೇ ಸಾಲಿನ ಮೈಸೂರು ದಸರಾಗೆ ತೆರೆ ಎಳೆಯಲಾಯಿತು. ಅ.15ರಂದು ನಾದಬ್ರಹ್ಮ ಹಂಸಲೇಖ ಅವರು ಚಾಮುಂಡಿಬೆಟ್ಟದಲ್ಲಿ ದಸರಾಗೆ ಚಾಲನೆ ನೀಡಿದ್ದರು. 

ದಸರಾ ಮಹೋತ್ಸವದ ಗ್ರ್ಯಾಂಡ್ ಫಿನಾಲೆ ವೀಕ್ಷಿಸಲು ಸಾವಿರಾರು ಜನರು ನೆರೆದಿದ್ದರು. ಪ್ರಪಂಚದಾದ್ಯಂತದ ಜನರು ಈ ಭವ್ಯವಾದ ದೃಶ್ಯಗಳನ್ನು ವೀಕ್ಷಿಸಲು ಮೈಸೂರಿಗೆ ಭೇಟಿ ನೀಡಿದರು. ಚಾಮುಂಡೇಶ್ವರಿ ದೇವಿಯು ಮಹಿಷಾಸುರನನ್ನು ಕೊಂದಿದ್ದರಿಂದ ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಎಂಬುದರ ಸಂಕೇತವಾಗಿ ವಿಜಯದಶಮಿ ಅಥವಾ ದಸರಾವನ್ನು ಆಚರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com