ಬೆಂಗಳೂರು: ಕನ್ನಡದ ವರನಟ ಡಾ ರಾಜ್ ಕುಮಾರ್ ಅವರ ತೃತೀಯ ಪುತ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಎರಡನೇ ವರ್ಷದ ಪುಣ್ಯತಿಥಿ ಇಂದು ಅಕ್ಟೋಬರ್ 29ರಂದು. ಅವರ ಸಮಾಧಿಯಿರುವ ಸ್ಥಳ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಇಂದು ಬೆಳಗ್ಗೆ ಕುಟುಂಬಸ್ಥರೆಲ್ಲಾ ಸೇರಿ ಪುಣ್ಯತಿಥಿಯಂದು ಸ್ಮರಿಸಿ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಪುಣ್ಯ ತಿಥಿಯ ಅಂಗವಾಗಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಪುತ್ರಿ, ನಟ ಶಿವರಾಜ್ ಕುಮಾರ್ ದಂಪತಿ, ರಾಘವೇಂದ್ರ ರಾಜ್ ಕುಮಾರ್ ದಂಪತಿ, ಪುತ್ರರು, ಪುನೀತ್ ಅಕ್ಕಂದಿರು ಹಾಗೂ ಇತರ ಬಂಧು ಬಳಗದವರು ಬೆಳಗ್ಗೆಯೇ ಆಗಮಿಸಿ ಪೂಜೆ ಶಾಸ್ತ್ರ ನೆರವೇರಿಸಿದರು. ಅಪ್ಪು ಅವರಿಗೆ ಪ್ರಿಯವಾದ ತಿಂಡಿ-ತಿನಿಸುಗಳನ್ನು ಮಾಡಿ ತಂದು ಸಮಾಧಿ ಬಳಿ ಇಟ್ಟು ಸುತ್ತು ಹಾಕಿ ಕಂಬನಿ ಮಿಡಿದರು.
ಕಂಠೀರವ ಸ್ಟುಡಿಯೋಗೆ ರಾಜ್ ಕುಟುಂಬದವರು ಹಾಗೂ ಆಪ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಮಾಧಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇಡೀ ರಾಜ್ ಕುಟುಂಬ ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದರು.
ನಟ ಪುನೀತ್ ರಾಜ್ಕುಮಾರ್ 2ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಪುನೀತ್ ರಾಜ್ಕುಮಾರ್ ಸಮಾಧಿಗೆ ರಾಜ್ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ, ಮಕ್ಕಳಿಂದ ಪುನೀತ್ ಸಮಾಧಿಗೆ ನಮನ. ರಾಘವೇಂದ್ರ ರಾಜ್ಕುಮಾರ್, ಪುತ್ರ ಯುವರಾಜ್ಕುಮಾರ್, ಅಕ್ಕ ಪೂರ್ಣಿಮಾ, ಮಗಳು ಧನ್ಯಾ ರಾಮ್ಕುಮಾರ್ರಿಂದ ನಮನ ಸಲ್ಲಿಸಲಾಯಿತು. ಪುನೀತ್ಗೆ ಇಷ್ಟವಾಗಿದ್ದ ಆಹಾರ ಪದಾರ್ಥ ಇಟ್ಟು ಸಮಾಧಿಗೆ ಪೂಜೆ ಸಲ್ಲಿಸಲಾಯಿತು.
ಗಣ್ಯರು, ಕಲಾವಿದರು, ರಾಜಕಾರಣಿಗಳಿಂದ ಸ್ಮರಣೆ: ಪುನೀತ್ ಅಗಲಿಗೆ ಕನ್ನಡ ಚಿತ್ರರಂಗ ಪಾಲಿಗೆ, ಕನ್ನಡ ನಾಡಿಗೆ ಸಹ ತುಂಬಲಾರದ ನಷ್ಟ ಎಂದರೆ ತಪ್ಪಾಗಲಾರದು. ಅವರ ಹಠಾತ್ ನಿಧನವನ್ನು ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರನ್ನು ಇಂದು ನಾಡಿನ ಗಣ್ಯರು, ಕಲಾವಿದರು, ರಾಜಕಾರಣಿಗಳು ಸ್ಮರಿಸಿದ್ದಾರೆ.
Advertisement