ಬೆಂಗಳೂರು: ಮಹಾತ್ಮ ಗಾಂಧೀಜಿ ಅವರನ್ನು ಕೊಂದ ಮನಸ್ಥಿತಿಯವರೇ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಇಂದು ನಗರದ ಟೌನ್ ಹಾಲ್ನಲ್ಲಿ ನಡೆದ ಗೌರಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗೌರಿ ಲಂಕೇಶ್ ಅನೇಕ ಬಾರಿ ಭೇಟಿಯಾಗಿದ್ದರು. ಆದರೆ ಅವರು ಯಾವತ್ತೂ ವೈಯಕ್ತಿಕ ಸಹಾಯ ಕೇಳಲಿಲ್ಲ. ಸಾಮಾಜಿಕ ಸಮಸ್ಯೆಗಳ ಬಗ್ಗೆ ನನ್ನ ಬಳಿ ಚರ್ಚೆ ಮಾಡುತ್ತಿದ್ದರು ಎಂದರು.
ಕೋಮುವಾದಿಗಳೇ ಪತ್ರಕರ್ತೆ ಗೌರಿ ಲಂಕೇಶ್ರನ್ನು ಹತ್ಯೆ ಮಾಡಿದರು. ಕೋಮುವಾದಿಗಳಿಗೆ ಹಿಂದೂಗಳು ಹಾಗೂ ಮುಸ್ಲಿಂ ಒಟ್ಟಾಗಿ ಇರುವುದು ಇಷ್ಟವಿಲ್ಲ. ಕೋಮುವಾದಿಗಳು ಬೆದರಿಕೆ ಪತ್ರ ಬರೆಯುತ್ತಾರೆ. ಆದರೆ ಯಾರೂ ಭಯಪಡಬೇಡಿ. ಕೋಮುವಾದದ ವಿರುದ್ಧ ಹೋರಾಟ ಮಾಡೋಣ ಎಂದು ಸಿಎಂ ಹೇಳಿದರು.
ಇದೇ ವೇಳೆ ರಾಜ್ಯದ ಸಾಹಿತಿಗಳು, ಕವಿಗಳು, ಚಿಂತಕರಿಗೆ ಬೆದರಿಕೆ ಪತ್ರ ವಿಚಾರ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಬೆದರಿಕೆ ಪತ್ರ, ಬೆದರಿಕೆ ಕರೆಗಳ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದೇನೆ. ಅದೇ ರೀತಿ, ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದೇನೆ. ಮೈಸೂರಿನಲ್ಲಿ ಇದಕ್ಕೆ ಡಿವೈಎಸ್ಪಿ ನೇತೃತ್ವದಲ್ಲಿ ಒಂದು ಕಚೇರಿಯನ್ನೇ ತೆರೆದಿದ್ದೇವೆ. ಗೌರಿ ಲಂಕೇಶ್ ಹತ್ಯೆ ಕುರಿತಾಗಿ 1 ಸಾವಿರ ಪುಟದ ಚಾರ್ಜ್ ಶೀಟ್ ದಾಖಲಾಗಿದೆ. ಪ್ರಾಮಾಣಿಕ ತನಿಖೆಯಾಗಿದೆ, ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.
Advertisement