ಬೆಂಗಳೂರು: ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಪಡೆ ವಿರುದ್ಧ ಪ್ರಚಂಡ ಗೆಲುವು ದಾಖಲಿಸಿದ ಟೀಂ ಇಂಡಿಯಾಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಭ ಕೋರಿದ್ದಾರೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಆರು ವಿಕೆಟ್ ಗಳ ನೆರವಿನಿಂದ ಭರ್ಜರಿ ಜಯಭೇರಿ ಬಾರಿಸಿತು.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಡಿಕೆಶಿ, ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು ಎಂದು ಕರೆದಿದ್ದಾರೆ. ಸಿರಾಜ್ ಅವರ ಬೌಲಿಂಗ್ ದಾಳಿ ಕಂಡು ಬೆರಗಾದೆ. ಟೀಂ ಇಂಡಿಯಾ ಕಲಿಗಳ ಗೆಲುವಿನ ನಾಗಾಲೋಟ ಹೀಗೇ ಮುಂದುವರಿಯಲಿ. ಜೈಹೋ ಟೀಂ ಇಂಡಿಯಾ! ಎಂದು ಶುಭ ಹಾರೈಸಿದ್ದಾರೆ.
ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ತಂಡಕ್ಕೆ ಮಾರಕವಾದರು. ಅಲ್ಲದೇ, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ಓವರ್ನಲ್ಲಿ 4 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಏಷ್ಯಾಕಪ್ 2023 ರ ಶ್ರೀಲಂಕಾ ವಿರುದ್ಧದ ಫೈನಲ್ನಲ್ಲಿ, ಮೊಹಮ್ಮದ್ ಸಿರಾಜ್ ಕೇವಲ 15 ಎಸೆತಗಳಲ್ಲಿ 5 ವಿಕೆಟ್ಗಳನ್ನು ಕಬಳಿಸಿದ್ದು ಇದು ದಾಖಲೆಯಾಗಿದೆ. ಈ ಮೂಲಕ ಮೊಹಮ್ಮದ್ ಸಿರಾಜ್ ವೇಗವಾಗಿ 50 ವಿಕೆಟ್ ಪಡೆದ ನಾಲ್ಕನೇ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.
Advertisement