ಕಾವೇರಿ ಹೋರಾಟದ ನಡುವೆ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರ ಹರಿವು ಹೆಚ್ಚಳ, ಬಂದ್ ಬಗ್ಗೆ ಇಂದು ನಿರ್ಧಾರ

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ವಿವಿಧೆಡೆ ಪ್ರತಿಭಟನೆಯ ನಡುವೆಯೇ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರಹರಿವು ಹೆಚ್ಚಳವಾಗಿದ್ದು, ಭಾನುವಾರ 6,874 ಕ್ಯೂಸೆಕ್ ನೀರು ಬಿಡಲಾಗಿದೆ.
ಕೆಆರ್ ಎಸ್
ಕೆಆರ್ ಎಸ್

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ವಿವಿಧೆಡೆ ಪ್ರತಿಭಟನೆಯ ನಡುವೆಯೇ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರಹರಿವು ಹೆಚ್ಚಳವಾಗಿದ್ದು, ಭಾನುವಾರ 6,874 ಕ್ಯೂಸೆಕ್ ನೀರು ಬಿಡಲಾಗಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ನಿರ್ದೇಶನಗಳಿಗೆ ಬದ್ಧವಾಗಿ ಬಿಡುಗಡೆಯಾದ ನೀರಿನ ನಿಖರವಾದ ಪ್ರಮಾಣದ ಬಗ್ಗೆ ಕಾವೇರಿ ನೀರಾವರಿ ನಿಗಮ ಲಿಮಿಟೆಡ್ ನ ಅಧಿಕಾರಿಗಳು ಮತ್ತು ನೀರಾವರಿ ಅಧಿಕಾರಿಗಳು ಮಾಹಿತಿ ನೀಡದಿದ್ದರೂ ಅಧಿಕೃತ ಅಂಕಿಅಂಶಗಳ ಪ್ರಕಾರ 3,838 ಕ್ಯೂಸೆಕ್ ನೀರನ್ನು ನದಿಗೆ  ಮತ್ತು 3,036 ಕ್ಯೂಸೆಕ್ ನೀರನ್ನು ನಾಲೆಗೆ ಬಿಡಲಾಗಿದೆ. ಸೆಪ್ಟೆಂಬರ್ 27 ರವರೆಗೆ ಪ್ರತಿದಿನ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. 

ಹೊರಹರಿವು 6,874 ಕ್ಯುಸೆಕ್ ಇದ್ದರೆ, ಅಣೆಕಟ್ಟಿನ ಒಳಹರಿವು 6,156 ಕ್ಯೂಸೆಕ್ಕೆ ಕಡಿಮೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 24 ರಂದು ಅಣೆಕಟ್ಟಿನ ನೇರ ಸಾಮರ್ಥ್ಯ 40.40 ಟಿಎಂಸಿ ಅಡಿಯಾಗಿದ್ದರೆ, ಭಾನುವಾರದಂದು 96. 80 ಅಡಿ ನೀರಿನ ಪ್ರಮಾಣದೊಂದಿಗೆ 12.02 ಟಿಎಂಸಿ ಅಡಿ ಗಳಷ್ಟಿತ್ತು. ಕಳೆದ ವರ್ಷ ಇದೇ ದಿನ 124.38 ಅಡಿಗಳಷ್ಟು ನೀರಿದ್ದು ಅಣೆಕಟ್ಟು ತುಂಬಿತ್ತು.  ಕೆಆರ್‌ಎಸ್ ಅಣೆಕಟ್ಟೆ ಮಾತ್ರವಲ್ಲದೆ ಕಬಿನಿ ಅಣೆಕಟ್ಟೆಯಿಂದಲೂ ನೀರು ಬಿಡಲಾಗಿದೆ. ಭಾನುವಾರ 4,890 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು, ಅದರಲ್ಲಿ 2,500 ಕ್ಯೂಸೆಕ್ ನದಿಗೆ ಹಾಗೂ 2,390 ಕ್ಯೂಸೆಕ್ ನಾಲೆಗಳಿಗೆ ಬಿಡಲಾಗಿದೆ.

ಶುಕ್ರವಾರ ಬಂದ್: ಈ ಮಧ್ಯೆ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದ ಹಲವು ಕನ್ನಡಪರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ ಮಾಡುವುದಾಗಿ ಘೋಷಿಸಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಕನ್ನಡ ಪರ ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದು, ಅಧಿಕೃತವಾಗಿ ಬಂದ್ ದಿನವನ್ನು ಘೋಷಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com