ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕರೊಬ್ಬರು ಶನಿವಾರ ರಾತ್ರಿ ಜಂಕಲ್ ಗ್ರಾಮದ ಬಳಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿ ಹಾಗೂ ಕೆಲ ಸದಸ್ಯರು ಕಾರಣ ಎಂದು ತಿಪ್ಪೇಸ್ವಾಮಿ ಅವರು ಡೆತ್ ನೋಟ್ ನಲ್ಲಿ ಆರೋಪಿಸಿದ್ದಾರೆ.
ಆದರೆ, ತಿಪ್ಪೇಸ್ವಾಮಿ ಅವರ ಪುತ್ರ ರಾಜಶೇಖರ್, ಹೊಸದುರ್ಗ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, ಶಾಸಕ ಹಾಗೂ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ದೂರಿಲ್ಲ. ಬದಲಾಗಿ ಪಂಚಾಯಿತಿ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ಮಾತ್ರ ತಂದೆಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ತನ್ನ ಸಾವಿಗೆ ಚಂದ್ರಪ್ಪ, ರವಿ, ಮೋಹನ್, ಮೂರ್ತಿ, ಉಗ್ರಪ್ಪ, ಲವ ಮತ್ತು ರಾಜಪ್ಪ ಕಾರಣ ಎಂದು ತಿಪ್ಪೇಸ್ವಾಮಿ ತಮ್ಮ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ. ಆದರೆ, ಚಂದ್ರಪ್ಪ ಅವರು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದು, ಹಿರಿಯ ಶಾಸಕರಾಗಿರುವ ನಾನು ಗೆಜೆಟೆಡ್ ಅಧಿಕಾರಿಗಳೊಂದಿಗೆ ಮಾತ್ರ ಸಂವಹನ ನಡೆಸುತ್ತೇನೆಯೇ ಹೊರತು ಪಂಚಾಯಿತಿ ಮಟ್ಟದ ಅಧಿಕಾರಿಗಳೊಂದಿಗೆ ಅಲ್ಲ ಎಂದಿದ್ದಾರೆ.
Advertisement