ಹಾವೇರಿ: ಪಟಾಕಿ ಗೋದಾಮಿಗೆ ಬೆಂಕಿ, ನಾಲ್ವರು ಸಜೀವ ದಹನ; 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದ ಪಟಾಕಿ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನವಾಗಿದ್ದು, ಗೋದಾಮಿನ ಪಕ್ಕದಲ್ಲಿದ್ದ ಮಹಿಳೆ ಸೇರಿದಂತೆ ಮೂವರು ಗಂಭೀರವಾಗಿ...
ಹಾವೇರಿಯಲ್ಲಿ ಬೆಂಕಿ ಅವಘಡ
ಹಾವೇರಿಯಲ್ಲಿ ಬೆಂಕಿ ಅವಘಡ

ಹಾವೇರಿ: ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದ ಪಟಾಕಿ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನವಾಗಿದ್ದು, ಗೋದಾಮಿನ ಪಕ್ಕದಲ್ಲಿದ್ದ ಮಹಿಳೆ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಾವೇರಿಯ ಹೊರವಲಯದ ಆಲದಕಟ್ಟಿ ಗ್ರಾಮದಲ್ಲಿ ಕುಮಾರ್​ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಈ ದುರಂತ ಸಂಭವಿಸಿದ್ದು, ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ.

ಮೃತರನ್ನು ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಕಾಟೇನಹಳ್ಳಿ ಗ್ರಾಮದ 45 ವರ್ಷದ ದ್ಯಾಮಪ್ಪ ಓಲೇಕಾರ, 28 ವರ್ಷದ ರಮೇಶ್ ಬಾರ್ಕಿ, 28 ವರ್ಷದ ಶಿವಲಿಂಗ ಅಕ್ಕಿ ಮತ್ತು 45 ವರ್ಷದ ಜಯಣ್ಣ ಎಂದು ಗುರುತಿಸಲಾಗಿದೆ. ನಾಲ್ವರ ದೇಹಗಳು ಸುಟ್ಟು ಕರಕಲಾಗಿವೆ.

ಗೋದಾಮಿನ ಸಮೀಪದ ಮನೆಯ ನಿವಾಸಿ ಕಲಾವತಿ, ವಾಸಿಂ ಶಫಿ ಅಹಮದ್ ಮತ್ತು ಶೇರು ಮಾಳಪ್ಪ ಕಟ್ಟಿಮನಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಟಾಕಿ ಅವಘಡದ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಪಟಾಕಿ ಇಟ್ಟಿದ್ದ ಕಟ್ಟಡದ ಬಳಿ ವೆಲ್ಡಿಂಗ್​ ಕಾರ್ಯ ನಡೆಯುತ್ತಿತ್ತು. ಪರಿಣಾಮ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಬೆಂಕಿ ಕಿಡಿ ತಗುಲಿರುವ ಶಂಕೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com