ಈ ಬಾರಿ ಬೇಸಿಗೆಯಲ್ಲಿ ತಾಪಮಾನ ಅಧಿಕ, ಮುಂಗಾರಿನಲ್ಲಿ ಉತ್ತಮ ಮಳೆ: ಹವಾಮಾನ ತಜ್ಞರು
ಮುಂಜಾನೆ ಮತ್ತು ರಾತ್ರಿ ಹೊತ್ತು ವಿಪರೀತ ಚಳಿ, ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆ ವಿಪರೀತ ಬಿಸಿಲು ಆರಂಭ, ಇದು ಸದ್ಯದ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳ ತಾಪಮಾನ ಪರಿಸ್ಥಿತಿ.
Published: 09th February 2023 09:38 AM | Last Updated: 09th February 2023 09:38 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂಜಾನೆ ಮತ್ತು ರಾತ್ರಿ ಹೊತ್ತು ವಿಪರೀತ ಚಳಿ, ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆ ವಿಪರೀತ ಬಿಸಿಲು ಆರಂಭ, ಇದು ಸದ್ಯದ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳ ತಾಪಮಾನ ಪರಿಸ್ಥಿತಿ.
ಫೆಬ್ರವರಿ ಮೊದಲ ವಾರದಲ್ಲಿಯೇ ತಾಪಮಾನವು ಗಗನಕ್ಕೇರಲು ಪ್ರಾರಂಭಿಸಿದ್ದರೂ, ಈ ಬೇಸಿಗೆಯಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಈ ಬಾರಿ ಮಾನ್ಸೂನ್ ಸಮಯದಲ್ಲಿ ಉತ್ತಮ ಮಳೆಯು ಕೆರೆ-ಕಟ್ಟೆಗಳು ಮತ್ತು ಇತರ ಜಲಮೂಲಗಳಲ್ಲಿ ನೀರು ತುಂಬುವಂತೆ ಮಾಡುತ್ತದೆ. ಮಣ್ಣಿನ ತೇವಾಂಶವನ್ನು ಹೆಚ್ಚಿಸುತ್ತದೆ, ಇದು ವಾತಾವರಣವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.
ಹವಾಮಾನ ತಜ್ಞರ ಪ್ರಕಾರ, ಜನವರಿ ಕೊನೆಯ ವಾರದಲ್ಲಿ, ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನವು 27-28 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು, ಅದು ಈಗ 31 ಡಿಗ್ರಿ ಸೆಲ್ಸಿಯಸ್ಗೆ ಏರಿದೆ. ತಾಪಮಾನ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ಮಾತನಾಡಿದ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ಕೆಲವು ದಿನಗಳ ಹಿಂದೆ ಉತ್ತರ ಭಾರತದಲ್ಲಿ ಶೀತದ ಅಲೆ ಇತ್ತು, ಅದರ ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣದಲ್ಲಿಯೂ ಕಂಡುಬಂದಿದೆ, ಇದು ಚಳಿಗೆ ಕಾರಣವಾಯಿತು. ಈಗ, ಹವಾಮಾನವು ಸಾಮಾನ್ಯವಾಗಿದೆ. ನಾವು ತಾಪಮಾನ ಏರಿಕೆಯನ್ನು ಎದುರಿಸುತ್ತಿದ್ದೇವೆ. ಶ್ರೀಲಂಕಾದ ಮೇಲಿರುವ ತೊಟ್ಟಿ ಕೂಡ ಈಗ ಬಿಸಿಯಾಗಲು ಕಾರಣವಾಗಿದೆ ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮತ್ತು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಈ ಬಾರಿ ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನ ಇರಬಹುದು ಎಂದಿದ್ದಾರೆ. ಕೆಲವು ಪ್ರದೇಶಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಸಹ ಮುಟ್ಟಬಹುದು ಎಂದು ಹೇಳುತ್ತಾರೆ. ಈಗಾಗಲೇ ತಾಪಮಾನ ಹೆಚ್ಚಾಗಲಾರಂಭಿಸಿದ್ದು, ಫೆಬ್ರವರಿ 15ರ ವೇಳೆಗೆ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಲಿದೆ. "ಕಳೆದ ಕೆಲವು ವರ್ಷಗಳಿಂದ ಬೇಸಿಗೆಯಲ್ಲಿ ಸ್ವಲ್ಪ ಹೆಚ್ಚಿನ ತಾಪಮಾನಕ್ಕೆ ಉಂಟಾಗುತ್ತಿದೆ. ಈ ವರ್ಷವೂ ಇದೇ ರೀತಿಯ ಪ್ರವೃತ್ತಿಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ಯಾವುದೇ ಶಾಖದ ಅಲೆ ಇರುವುದಿಲ್ಲ ಎಂದು IMD ಮೂಲಗಳು ತಿಳಿಸಿವೆ.
ಮುಂಗಾರು ಹೇಗಿರುತ್ತದೆ?: ಕರ್ನಾಟಕವು ಕಳೆದ ಮುಂಗಾರು ಅವಧಿಯಲ್ಲಿ ಭಾರೀ ಮಳೆಯನ್ನು ಕಂಡಿದೆ. 839 ಮಿಮೀ ವಾಡಿಕೆಯಂತೆ 1,009 ಮಿಮೀ ನಷ್ಟು ಮಳೆಯಾಗಿದೆ. ಕಳೆದೆರಡು ವರ್ಷಗಳಿಂದ ಕರ್ನಾಟಕವು ಉತ್ತಮ ಮಳೆಯನ್ನು ಪಡೆಯುತ್ತಿದೆ, ಇದು ಹೆಚ್ಚಿನ ಜಲಮೂಲಗಳನ್ನು ತುಂಬಿದೆ, ಇದು ಅಂತರ್ಜಲವನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ. ಮಣ್ಣಿನ ತೇವಾಂಶವನ್ನು ಅಧಿಕವಾಗಿರಿಸುತ್ತದೆ. ಈ ಬಾರಿಯ ಮುಂಗಾರು ಮಳೆಯಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆ ಕಡಿಮೆಯಾಗುವ ನಿರೀಕ್ಷೆ ಇದ್ದು, ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಜಲವಿದ್ಯುತ್ ಉತ್ಪಾದನೆಗೂ ಇದರಿಂದ ಸಹಾಯವಾಗಲಿದೆ ಎನ್ನುತ್ತಾರೆ.