ಬೆಂಗಳೂರು: ಕಡಿಮೆ ಆದಾಯದವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವೃತ್ತಿಪರ ತೆರಿಗೆ (Profession Tax) ಯನ್ನು 15 ಸಾವಿರದಿಂದ 25 ಸಾವಿರಕ್ಕೆ ಏರಿಕೆ ಮಾಡಿರುವುದಾಗಿ ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ.
ವೃತ್ತಿಪರ ತೆರಿಗೆ ವಿನಾಯಿತಿ ಮಿತಿ ಏರಿಕೆಯಿಂದಾಗಿ ಕಡಿಮೆ ವರಮಾನದ ವರ್ಗಕ್ಕೆ ಅನುಕೂಲವಾಗಲಿದೆ ಎಂದು ಸಿಎಂ ಹೇಳಿದ್ದಾರೆ.
25 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವವರಿಂದ ವೃತ್ತಿಪರ ತೆರಿಗೆ ಪಡೆಯಲಾಗುವುದಿಲ್ಲ. 25 ಸಾವಿರ ರೂಗಿಂತ ಹೆಚ್ಚು ಸಂಬಳ ಪಡೆಯುವವರು 200 ರೂ ವೃತ್ತಿ ತೆರಿಗೆ ಪಾವತಿಸಬೇಕಾಗುತ್ತದೆ.
ತೆರಿಗೆ ಕುರಿತು ಬಜೆಟ್ ನಲ್ಲಿ ಪ್ರಸ್ತಾಪವಾದ ಅಂಶಗಳು ಹೀಗಿವೆ...
ರಾಜ್ಯದಲ್ಲಿ ಜಿಎಸ್ಟಿ ಸಂಗ್ರಹ ಗಣನೀಯವಾಗಿ ಹೆಚ್ಚಿದೆ. 2022-23ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಸಿಗುವ ಜಿಎಸ್ಟಿ ಪರಿಹಾರ ಸೇರಿ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹವು 93,558 ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್ಟಿ ಪರಿಹಾರ ಹೊರತುಪಡಿಸಿ 72,010 ಕೋಟಿ ರೂ ಗುರಿ ಹೊಂದಿತ್ತು. ಇದನ್ನು ಮೀರಿ 83,010 ಕೋಟಿ ರೂ ಸಂಗ್ರಹ ಮಾಡಲಾಗುತ್ತಿದೆ. ಕೇಂದ್ರದಿಂದ ಜಿಎಸ್ಟಿ ಪರಿಹಾರವಾಗಿ 10,548 ಕೋಟಿ ರೂ ಸಿಗಲಿದೆ.
2023-24 ರ ಸಾಲಿನ ವರ್ಷಕ್ಕೆ ಜಿಎಸ್ಟಿ ಪರಿಹಾರ ಹೊರತುಪಡಿಸಿ 92,000 ಕೋಟಿ ರೂ ತೆರಿಗೆ ಸಂಗ್ರಹಿಸಬೇಕೆಂದು ವಾಣಿಜ್ಯ ಇಲಾಖೆಗೆ ಗುರಿ ಕೊಡಲಾಗಿದೆ.
Advertisement