ಮೈಸೂರಿನಲ್ಲಿ ಬಾಲಕನ ಕೊಂದ ಚಿರತೆ ಹುಡುಕಾಟಕ್ಕೆ ವಿಶೇಷ ಪಡೆ ರಚನೆ: ಮುಖ್ಯಮಂತ್ರಿ ಬೊಮ್ಮಾಯಿ
11 ವರ್ಷದ ಬಾಲಕನನ್ನು ಕೊಂದಿರುವ ಚಿರತೆಯನ್ನು ಸೆರೆ ಹಿಡಿಯಲು ತೀವ್ರ ಹುಡುಕಾಟ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Published: 22nd January 2023 06:15 PM | Last Updated: 23rd January 2023 03:27 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಮೈಸೂರು: 11 ವರ್ಷದ ಬಾಲಕನನ್ನು ಕೊಂದಿರುವ ಚಿರತೆಯನ್ನು ಸೆರೆ ಹಿಡಿಯಲು ತೀವ್ರ ಹುಡುಕಾಟ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ನಂಜನಗೂಡಿನ ಹೆಲಿಪ್ಯಾಡಿನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಮತ್ತೊಂದು ಚಿರತೆ 11 ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಇಂದು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚಿರತೆ ಕಳೆದ ಮೂರು ಬಾರಿ ದಾಳಿ ಮಾಡಿರುವ ಪ್ರದೇಶಗಳು ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಇದೆ. ಬೆಳಿಗ್ಗೆಯೇ ನಮ್ಮ ಅರಣ್ಯ ಸಂರಕ್ಷಣಾಧಿಕಾರಿಗಳ ಬಳಿ ಮಾತನಾಡಿ 2 ರಿಂದ 3 ಕಿಮೀ ವ್ಯಾಪ್ತಿಯಲ್ಲಿ ವಿಶೇಷ ಪಡೆಗಳನ್ನು ಬಳಸಿ ಚಿರತೆಗಳನ್ನು ಸೆರೆ ಹಿಡಿಯಲು ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶ ನೀಡಿದ್ದೇನೆ ಎಂದರು.
ಇದನ್ನೂ ಓದಿ: ಮೈಸೂರಿನಲ್ಲಿ ಮುಂದುವರಿದ ಹಾವಳಿ; ಶಂಕಿತ ಚಿರತೆ ದಾಳಿಗೆ 11 ವರ್ಷದ ಬಾಲಕ ಸಾವು
ಗಡಿ ಪ್ರದೇಶದಲ್ಲಿ ವಿಶೇಷ ಕಾವಲುಗಾರರನ್ನು ನೇಮಿಸಿ, ಜನರಲ್ಲಿ ಜಾಗೃತಿ ಮೂಡಿಸುವುದು, ಸಂಜೆ ಮೇಲೆ ಹೊರಗೆ ತೆರಳದಂತೆ ಜನರಿಗೆ ತಿಳಿಸುವುದು ಇತ್ಯಾದಿಗಳನ್ನು ಮಾಡಬೇಕು. ಗಡಿ ಪ್ರದೇಶದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಯವರು ಬಂದೂಕುಧಾರಿಗಳಾಗಿ ಕಾವಲು ಕಾಯಬೇಕು. ಮೃತರ ಕುಟುಂಬಗಳಿಗೆ ನೀಡುವ ಪರಿಹಾರವನ್ನು ಹೆಚ್ಚಿಸಲಾಗಿದ್ದು ಕೂಡಲೇ ಕುಟುಂಬದವರಿಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮೊನ್ನೆಯಷ್ಟೇ ಒಂದು ಚಿರತೆಯನ್ನು ಹಿಡಿಯಲಾಗಿದೆ. ಇದನ್ನೂ ಆದಷ್ಟು ಬೇಗ ಸೆರೆ ಹಿಡಿಯಲು ಕ್ರಮ ವಹಿಸಲಾಗುವುದು ಎಂದರು.