ಬರ ಪೀಡಿತ ಪ್ರದೇಶ ಘೋಷಣೆಗೆ ಇರುವ ಮಾನದಂಡ ಬದಲಿಸುವಂತೆ ಕೇಂದ್ರಕ್ಕೆ ಪತ್ರ: ಕೃಷ್ಣ ಬೈರೇಗೌಡ

ಬರ ಪೀಡಿತ ಪ್ರದೇಶ ಘೋಷಿಸುವ ಉದ್ದೇಶದಿಂದ ಸಿದ್ಧಪಡಿಸಿರುವ "ಬರ ಕೈಪಿಡಿ"ಯಲ್ಲಿನ ಮಾನದಂಡಗಳು ವಾಸ್ತವತೆಯ ಆಧಾರದ ಮೇಲೆ ಬದಲಾವಣೆ ಮಾಡುವಂತೆ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಕಂದಾಯ...
ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಬರ ಪೀಡಿತ ಪ್ರದೇಶ ಘೋಷಿಸುವ ಉದ್ದೇಶದಿಂದ ಸಿದ್ಧಪಡಿಸಿರುವ "ಬರ ಕೈಪಿಡಿ"ಯಲ್ಲಿನ ಮಾನದಂಡಗಳು ವಾಸ್ತವತೆಯ ಆಧಾರದ ಮೇಲೆ ಬದಲಾವಣೆ ಮಾಡುವಂತೆ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ವಿಧಾನಸಭೆಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆ ಕೊರತೆ ಕುರಿತು ವಿಧಾನಸಭೆಯಲ್ಲಿ ನಡೆದ ಅಲ್ಪಾವಧಿ ಚರ್ಚೆಯ ವೇಳೆ ಮಾತನಾಡಿದ ಸಚಿವರು, ಪ್ರಸ್ತುತ ಕೇಂದ್ರದ ಬರ ಕೈಪಿಡಿ ಪ್ರಕಾರ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ ಮತ್ತು ಅದರ ಪ್ರಕಾರ ಪರಿಹಾರ ನೀಡಿದರೆ ಜನರಿಂದ ಆಕ್ರೋಶ ಎದುರಿಸಬೇಕಾಗುತ್ತದೆ ಎಂದರು.

''ಬರ ಘೋಷಣೆ ಮಾಡಲು ಕೇಂದ್ರ ಸರ್ಕಾರ ಬರ ಕೈಪಿಡಿ ಹೊಂದಿದ್ದು, ಈ ಕೈಪಿಡಿಯನ್ನು 2016ರಲ್ಲೇ ಬಿಡುಗಡೆ ಮಾಡಲಾಗಿತ್ತು. ಅದನ್ನು 2020ರಲ್ಲಿ ಪರಿಷ್ಕರಣೆ ಮಾಡಿ ಪ್ರಕಟಿಸಿತ್ತು. ಇದರ ಪ್ರಕಾರ ವಾಡಿಕೆಗಿಂತ ಶೇ. 60 ರಷ್ಟು ಮಳೆ ಕೊರತೆಯಾಗಿರಬೇಕು ಮತ್ತು ಕನಿಷ್ಠ ಮೂರು ವಾರಗಳ ಕಾಲ ಮಳೆಯಾಗದಿದ್ದರೆ ಎಂಬ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಅವರು ವಿವರಿಸಿದರು.

ಕೇಂದ್ರದ ಮಾನದಂಡಗಳ ಪ್ರಕಾರ, ರಾಜ್ಯದಲ್ಲಿ ಮಧ್ಯಮ ಬರಗಾಲವಿದ್ದರೆ ಪರಿಹಾರ ನೀಡಬೇಕು ಮತ್ತು ಜೂನ್-ಜುಲೈನಲ್ಲಿ ಮಳೆಯಾಗುವವರೆಗೆ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ಆಗಷ್ಟ್ ಮೊದಲ ವಾರದಲ್ಲೂ ಬರಗಾಲ ಘೋಷಣೆಗೆ ಅವಕಾಶ ಇಲ್ಲ. ಆದರೆ ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಿರುಗಿದರೆ ಮಾತ್ರ ಅಕ್ಟೋಬರ್ ನಲ್ಲಿ ಬರಗಾಲ ಪರಿಸ್ಥಿತಿ ಘೋಷಣೆ ಮಾಡಬಹುದು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ ಎಂದರು.

ಸಮಗ್ರ ಚರ್ಚೆಯ ನಂತರ ಬರಗಾಲ ಕೈಪಿಡಿಯಲ್ಲಿನ ಮಾನದಂಡಗಳು ವಾಸ್ತವಗಳಿಂದ ದೂರವಿರುವುದರಿಂದ ಅದನ್ನು ಬದಲಾಯಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ವಿವರವಾದ ಪತ್ರ ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಆದರೆ ಮುಂದಿನ ವಾರದಲ್ಲಿ ಸಂಪುಟ ಉಪಸಮಿತಿಯು ಕೇಂದ್ರದ ಮಾನದಂಡ ಆಧರಿಸಿ ತಾಲೂಕುಗಳಲ್ಲಿ ಬರ ಘೋಷಣೆ ಮಾಡುವ ಕುರಿತು ತೀರ್ಮಾನಿಸಲಿದೆ ಎಂದು ಸಚಿವರು ಹೇಳಿದ್ದಾರೆ.

ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ.56 ರಷ್ಟು ಮಳೆ ಕೊರತೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಮಳೆಯ ಕೊರತೆ ಇದೀಗ ಶೇ. 29ಕ್ಕೆ ಇಳಿದಿದೆ. ಹೀಗಾಗಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ” ಎಂದು ಮಾಹಿತಿ ನೀಡಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಆಗಸ್ಟ್ 3 ರವರೆಗೆ ಮುಂಗಾರು ಮಳೆ ಸಕ್ರಿಯವಾಗಿರುತ್ತದೆ. ಈ ಬಾರಿ 'ಎಲ್ ನಿನೋ' ಪರಿಣಾಮದ ಹೊರತಾಗಿಯೂ, ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ ಎಂದು ಅವರು ಹೇಳಿದರು.

ಬಿತ್ತಿದ ಬೆಳೆ ಹಾನಿ, ಕುಡಿಯುವ ನೀರು, ಮೇವಿನ ಬಗ್ಗೆ ಶಾಸಕರು ಪ್ರಸ್ತಾಪಿಸಿದ್ದನ್ನು ಗಮನಿಸಿದ ಸಚಿವರು, ಸರ್ಕಾರ ಈ ಎಲ್ಲದರ ಬಗ್ಗೆ ನಿರಂತರವಾಗಿ ನಿಗಾ ವಹಿಸಿದೆ ಮತ್ತು ಕಳೆದ ತಿಂಗಳು ಅತಿ ಕಡಿಮೆ ಮಳೆಯಾದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದರು ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ಜಿಲ್ಲೆಗೆ ತಲಾ ಒಂದು ಕೋಟಿ ರೂ. ನೀಡಿದ್ದಾರೆ ಎಂದರು.

ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ
ಸುಮಾರು 110 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಸರಕಾರವೇ ವೆಚ್ಚ ಭರಿಸುತ್ತಿದೆ. ನೀರಿನ ಕೊರತೆಯಿರುವ 330 ಗ್ರಾಮಗಳಲ್ಲಿ 404 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com