ಬೆಂಗಳೂರು: ಉಡುಪಿ ಕಾಲೇಜಿನ ವಿದ್ಯಾರ್ಥಿನಿಯ ಶೌಚಾಲಯ ವಿಡಿಯೊ ಚಿತ್ರೀಕರಣವನ್ನು ಮಕ್ಕಳಾಟವೆಂದು ನಾನು ಹೇಳಿಲ್ಲ. ಬಿಜೆಪಿಯವರು ಇದನ್ನು ಅನಗತ್ಯವಾಗಿ ರಾಜಕೀಯಗೊಳಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಘಟನೆ ಬಗ್ಗೆ ಗೃಹ ಸಚಿವರು ಲಘುವಾಗಿ ಮಾತನಾಡಿದ್ದಾರೆ, ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆದರು.
ಸ್ನೇಹಿತರ ಮಧ್ಯೆ ಇಂತಹ ಘಟನೆಗಳು ನಡೆಯುತ್ತೆ, ಅದೆಲ್ಲ ಅಲ್ಲಿಗೆ ಬಿಟ್ಟು ಹೋಗುತ್ತಿತ್ತು ಎಂದು ಹೇಳಿದ್ದು, ಅಂತಹ ಘಟನೆ ಕುರಿತು ಪ್ರಿನ್ಸಿಪಾಲ್ಗೆ ಬಿಡಬೇಕು. ಅದಕ್ಕೆ ಅವರನ್ನ ಸಸ್ಪೆಂಡ್ ಮಾಡೋದಾದರೇ ಅಥವಾ ಇನ್ನು ಹೆಚ್ಚಿನ ಕ್ರಮ ಬೇಕು ಅಂದರೆ ತೆಗೆದುಕೊಳ್ಳುತ್ತಾರೆ, ಅವರಿಗೆ ಬಿಟ್ಟಿದ್ದು. ನಾವು ಇದಕ್ಕೆ ಮಧ್ಯಪ್ರವೇಶ ಮಾಡಬಾರದು ಎಂದರು. ಇನ್ನು ಘಟನೆ ಕುರಿತು ಈಗಾಗಲೇ ಪೊಲೀಸರು ಸೂಮೋಟೋ ದಾಖಲಿಸಿಕೊಂಡಿದ್ದಾರೆ. ತನಿಖೆ ಆಗುತ್ತದೆ. ಸತ್ಯಾ ಸತ್ಯತೆ ಹೊರಬರುತ್ತದೆ ಎಂದಿದ್ದಾರೆ.
ಬಿಜೆಪಿಯವರಿಗೆ ಕಾರ್ಯವಿಧಾನ ಗೊತ್ತಿಲ್ಲವೇ? ಯಾವುದೇ ಕೇಸನ್ನು ದಾಖಲು ಮಾಡಿಕೊಂಡು ತನಿಖೆ ಮಾಡಲು ಗೃಹ ಇಲಾಖೆಯಲ್ಲಿ ಸೂಕ್ತ ವಿಧಾನ ಇದೆ. ಬೊಮ್ಮಾಯಿಯವರು, ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದವರು, ಅವರಿಗೆ ವಿಧಾನ ಗೊತ್ತಿಲ್ಲವೇ, ವಿಷಯಾಂತರಗೊಳಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಮಕ್ಕಳಾಟ ಎಂದು ಹೇಳಿಲ್ಲ: ನಾವೆಲ್ಲ ಕಾಲೇಜಲ್ಲಿ, ಹಾಸ್ಟೆಲ್ ನಲ್ಲಿ ಓದಿದ್ದೇವೆ, ಮಕ್ಕಳ ಮಧ್ಯೆ ಇಂತಹ ಘಟನೆ ನಡೆಯುವುದು, ಅಲ್ಲೇ ಬಿಟ್ಟು ಹೋಗುತ್ತಿತ್ತು. ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ಇದು ಕೂಡ ಅಂತಹದ್ದೇ ಅರ್ಥದಲ್ಲಿ ಆಗಿರಬಹುದು ಎಂದು ನಾನು ನಿನ್ನೆ ಹೇಳಿದ್ದೆ ವಿನಃ ಮಕ್ಕಳಾಟ ಎಂದು ಹೇಳಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಪ್ರಾಂಶುಪಾಲರ ವಿವೇಚನೆಗೆ ಬಿಡಬೇಕು: ಈ ಘಟನೆಯನ್ನು ಕಾಲೇಜಿನ ಪ್ರಾಂಶುಪಾಲರ ವಿವೇಚನೆಗೆ ಬಿಡಬೇಕು, ಈ ಘಟನೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಆಗಿದೆ ಎಂದು ಪ್ರಾಂಶುಪಾಲರಿಗೆ ಅನಿಸಿದರೆ ಅವರು ಖಂಡಿತವಾಗಿ ದೂರು ನೀಡುತ್ತಾರೆ, ವಿದ್ಯಾರ್ಥಿನಿಯರ ಪೋಷಕರನ್ನು ಕರೆಸಿ ಮಾತನಾಡುತ್ತಾರೆ. ಅದು ಕಾಲೇಜಿಗೆ ಸಂಬಂಧಪಟ್ಟ ವಿಚಾರ. ನಾವು ಹೊರಗಿನಿಂದ ಹೋಗಿ ಬೇರೆ ರೀತಿಯಲ್ಲಿ ಅರ್ಥೈಸುವುದು ಸರಿಯಲ್ಲ ಎಂದು ಹೇಳಿದ್ದೇನೆ ವಿನಃ ಇದೊಂದು ಸಣ್ಣ ಘಟನೆ, ಅದನ್ನು ನಿರ್ಲಕ್ಷ್ಯ ಮಾಡಬೇಕೆಂದು ಹೇಳಿಲ್ಲ ಎಂದರು.
ಇಂತಹ ಪ್ರಕರಣವನ್ನು ತನಿಖೆ ಮಾಡಲು ಯುಜಿಸಿ ಇದೆ, ರ್ಯಾಗಿಂಗ್ ಗೆ ಮಾರ್ಗಸೂಚಿ ಮಾಡಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಇದೆ, ಇದನ್ನು ಹೆಚ್ಚಿನ ರೀತಿಯಲ್ಲಿ ತೆಗೆದುಕೊಂಡು ಹೋದಾಗ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸಿ ಎಂದು ಪೊಲೀಸರಿಗೆ ನಾನು ಕೂಡ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಆಯೋಗ ಬರಲಿ, ನಾನು ಬೇಡ ಅನ್ನಲ್ಲ: ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಷ್ಬೂ ಅವರು ಬಂದಿರುವ ಬಗ್ಗೆ ಕೇಳಿದಾಗ ಮಹಿಳಾ ಆಯೋಗದವರು ಬರಲಿ, ನಾನು ಬೇಡ ಅನ್ನಲ್ಲ, ಮಣಿಪುರ ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ, ಏನಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ, ಹಾಗಾದರೆ ಅಲ್ಲಿಗೆ ಏಕೆ ಹೋಗಿಲ್ಲ ಎಂದು ಪರಮೇಶ್ವರ್ ಪ್ರಶ್ನಿಸಿದರು.
Advertisement