ಬಿಜೆಪಿಯವರು ಉಡುಪಿ ವಿದ್ಯಾರ್ಥಿನಿಯ ವಿಡಿಯೊ ಚಿತ್ರೀಕರಣ ಘಟನೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ

ಉಡುಪಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೊವನ್ನು ಸಹಪಾಠಿಗಳು ಚಿತ್ರೀಕರಿಸಿದ ಘಟನೆ ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು, ಎಬಿವಿಪಿ ಸಂಘಟನೆ ಸದಸ್ಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಪ್ರಿಯಾಂಕ್ ಖರ್ಗೆ(ಸಂಗ್ರಹ ಚಿತ್ರ)
ಪ್ರಿಯಾಂಕ್ ಖರ್ಗೆ(ಸಂಗ್ರಹ ಚಿತ್ರ)

ಬೆಂಗಳೂರು: ಉಡುಪಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೊವನ್ನು ಸಹಪಾಠಿಗಳು ಚಿತ್ರೀಕರಿಸಿದ ಘಟನೆ ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು, ಎಬಿವಿಪಿ ಸಂಘಟನೆ ಸದಸ್ಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಪ್ರತಿಭಟನೆ, ಘಟನೆ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಪ್ರಶ್ನಿಸಿದಾಗ ಎಬಿವಿಪಿಯಂಥ ಸಂಘಟನೆಯವರು ಬಿಜೆಪಿಯ ಸಚಿವರನ್ನೇ ಬಿಟ್ಟಿರಲಿಲ್ಲ. ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದಾಗ ಅವರ ಕಚೇರಿಗೆ ಮುತ್ತಿಗೆ ಹಾಕಲು ನೋಡಿದ್ದರು ಎಂದರು.

ಈಗ ಬಿಜೆಪಿಯ ಸದಸ್ಯರಾದ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಷ್ಬೂ ಅವರು ಬಂದು ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮರಾಗಳು ಇರಲಿಲ್ಲ ಎಂದು ಹೇಳಿದ್ದಾರೆ. ನಾವು ಕೂಡ ಕ್ರಿಮಿನಲ್ ಉದ್ದೇಶದಿಂದ ವಿದ್ಯಾರ್ಥಿನಿಯರು ಹೀಗೆ ಮಾಡಿರಲಿಲ್ಲ ಎಂದಿದ್ದೆವು, ಈಗ ಬಿಜೆಪಿ ಮುಖಂಡರುಗಳೆಲ್ಲ ಮಾತನಾಡುತ್ತಿಲ್ಲವೇಕೆ ಎಂದು ಕೇಳಿದರು.

ಸರ್ಕಾರದ ಯಾವ ಇಲಾಖೆಯಾದರೂ ಕೇಡರ್ ಮತ್ತು ನೇಮಕಾತಿ ನಿಯಮ ಪ್ರಕಾರವೇ ನೇಮಕಾತಿ, ವರ್ಗಾವಣೆ ಮಾಡಿದ್ದೇವೆ. ಅವಧಿ ಪೂರ್ವ ವರ್ಗಾವಣೆಗಳಿದ್ದರೆ ಅದು ಸಿಎಂ ವಿವೇಚನೆಗೆ ಬಿಟ್ಟದ್ದಾಗಿರುತ್ತದೆ, ಅದು ಸಿಎಂ ಅವರ ಬಳಿಗೆ ಹೋಗಿದೆ. ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ, ಶೇಕಡಾ 90ರಷ್ಟು ನಿಯಮ ಪ್ರಕಾರವೇ ಆಗುತ್ತದೆ ಎಂದರು.

ದೆಹಲಿಯಿಂದ ಸಚಿವರಿಗೆ ಕರೆ ಬಂದಿದೆ: ದೆಹಲಿಯಲ್ಲಿ ಆಗಸ್ಟ್ 2ರಂದು ಹಿರಿಯ ನಾಯಕರು, ಮಂತ್ರಿಗಳ ಸಭೆ ಮಲ್ಲಿಕಾರ್ಜುನ ಖರ್ಗೆಯವರ, ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದರು. 

ಹಂತಹಂತವಾಗಿ ಕೆಲಸ ಮಾಡುತ್ತೇವೆ: ನಮ್ಮ ಸರ್ಕಾರ ಬಂದು ಎರಡು ತಿಂಗಳಾಗಿದೆ, ಜನರ ನಿರೀಕ್ಷೆಗಳು ಹೆಚ್ಚಿವೆ. ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗಲಿದೆ. ಅಭಿವೃದ್ಧಿ ಕೆಲಸಗಳಿಗೆ ಬೇಕಾದ ಹಣ ಸರ್ಕಾರ ನೀಡಲಿದೆ, ಪೂರಕ ಬಜೆಟ್ ಬರಲಿದೆ. ಅಗತ್ಯ ಇರುವ ಕಾಮಗಾರಗಳಿಗೆ ಸರ್ಕಾರದಿಂದ ಖಂಡಿತವಾಗಿ ಅನುದಾನ ಸಿಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com