ಬೆಂಗಳೂರು: ದೆಹಲಿ ನಂತರ ಬೆಂಗಳೂರು ಮೆಟ್ರೋ ಅತ್ಯಂತ ದೊಡ್ಡದಾಗಿದ್ದು, ಮೆಟ್ರೋ ಕಾಮಗಾರಿ ಚೆನ್ನಾಗಿ ನಡೆಯುತ್ತಿದೆ. ಪ್ರಯಾಣಿಕರಿಂದ ನಮ್ಮ ಮೆಟ್ರೋಗೆ 48 ಕೋಟಿ ರೂಪಾಯಿ ಆದಾಯ ಬರುತ್ತಿದ್ದು, ಖರ್ಚು ಕಳೆದು 6 ಕೋಟಿ ರೂಪಾಯಿ ಲಾಭ ಬರುತ್ತಿದೆ. ಜಾಹೀರಾತಿನಿಂದಲೂ ಸಾಕಷ್ಟು ಲಾಭ ಬರುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಬಿಎಂಆರ್ಸಿಎಲ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಅಧಿಕಾರಿಗಳ ಜತೆ ಸಭೆ ನಡೆಸಿ ವಾಸ್ತವಾಂಶ ಪರಿಶೀಲನೆ ನಡೆಸಿದ್ದೇನೆ. ರೈಲು ಸೇವೆ ಸುಧಾರಣೆಗಾಗಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದ್ದೇನೆ ಎಂದರು.
ನಾನೂ ಕೂಡ ಅನೇಕ ಬಾರಿ ನಮ್ಮ ಮೆಟ್ರೋದಲ್ಲಿ ಓಡಾಡಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿದೆ. ರಾತ್ರಿ 11 ಗಂಟೆ ನಂತರವೂ ಸೇವೆಯನ್ನು ವಿಸ್ತರಿಸಬೇಕೆನ್ನುವ ಸಲಹೆಗಳು ಕೇಳಿಬರುತ್ತಿವೆ. ರೈಲು ಓಡಾಟದ ಖರ್ಚು ಕಳೆದು 6 ಕೋಟಿ ಲಾಭ ಬರುತ್ತಿದೆ. ಜಾಹೀರಾತಿನಿಂದಲೂ ಸಾಕಷ್ಟು ಲಾಭ ಬರುತ್ತಿದೆ. ರಿಯಾಯಿತಿ ದರದಲ್ಲಿ ವಿದ್ಯುತ್ ದೊರೆಯುತ್ತಿದ್ದರೂ ಗ್ರೂಪ್ ಕ್ಯಾಪ್ಟೀವ್ ಮಾದರಿಯನ್ನು ಅನುಸರಿಸಿ ವಿದ್ಯುತ್ ವೆಚ್ಚ ಕಡಿಮೆ ಮಾಡುವಂತೆ ಸಲಹೆ ನೀಡಿದ್ದೇನೆ ಎಂದರು.
ನಮ್ಮ ಮೆಟ್ರೋ ಕಾಮಗಾರಿಗಳು ರಾತ್ರಿ ವೇಳೆ ಮಾತ್ರ ನಡೆಯುವ ಕಾರಣ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯ ವೇಗವನ್ನು ಹೇಗೆ ಬದಲಿಸಬೇಕೆನ್ನುವ ಕುರಿತು ಚರ್ಚಿಸಲಾಯಿತು. ಸರ್ಜಾಪುರ- ಹೆಬ್ಬಾಳ ಮೆಟ್ರೋ ಮಾರ್ಗ ಕುರಿತಂತೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಕೇಳಿದ್ದೇನೆ. ಅಲ್ಲದೇ ಮುಂದಿನ ಹಂತದಲ್ಲಿ ಯಾವ ಮಾರ್ಗದಲ್ಲಿ ಮೆಟ್ರೋ ಸಂಚರಿಸಿದರೆ ಸೂಕ್ತ ಎಂಬುದರ ಬಗ್ಗೆ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಪ್ರಸ್ತಾವನೆ ಸಿದ್ಧವಾಗಿದೆ. ಮೂರನೇ ಹಂತದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೂ ಸರ್ವೆ ಆಗುತ್ತಿದೆ. ಜಾಹೀರಾತುಗಳಿಂದ ಆದಾಯ ಹೆಚ್ಚಿಸುವುದಕ್ಕೆ ಸಭೆಯಲ್ಲಿ ಕೆಲ ಸಲಹೆ, ಸೂಚನೆಗಳನ್ನು ನೀಡಿದ್ದೇವೆ ಎಂದರು.
ನಮ್ಮ ಮೆಟ್ರೋದ ಮುಂದಿನ ಯೋಜನೆಗಳು ಮುಗಿಯಲಿರುವ ಸಮಯ ಹೀಗಿದೆ.
ಬಯ್ಯಪ್ಪನಹಳ್ಳಿ- ಕೆಆರ್ಪುರಂ: ಜುಲೈ
ಕೆಂಗೇರಿ- ಚಲ್ಲಘಟ್ಟ: ಆಗಸ್ಟ್ ಅಥವಾ ಸೆಪ್ಟೆಂಬರ್
ನಾಗಸಂದ್ರ- ಮಾದಾವರ: ಸೆಪ್ಟೆಂಬರ್ ಅಥವಾ ಅಕ್ಟೋಬರ್
ಬೊಮ್ಮಸಂದ್ರ - ಆರ್ವಿ ರಸ್ತೆ: ಅಕ್ಟೋಬರ್ ಅಥವಾ ನವೆಂಬರ್
ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆಆರ್ ಪುರಂ: 2026 ಜೂನ್
ಏರ್ಪೋರ್ಟ್ ಲೈನ್: 2026 ಜೂನ್
Advertisement