ಸಕ್ಕರೆ ನಾಡು ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿಗೆ ಕ್ಷಣಗಣನೆ: ಬದಲಾವಣೆ ಗಾಳಿ ಮೇಲ್ನೋಟಕ್ಕೆ ಕಾಣುತ್ತಿಲ್ಲ ಜನರ ಮನಸ್ಸಿನಲ್ಲಿ ಇದೆ ಎಂದ ಸುಮಲತಾ ಅಂಬರೀಷ್
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಇನ್ನು ಕೆಲವೇ ಕ್ಷಣಗಳಲ್ಲಿ ಉದ್ಘಾಟಿಸಲಿದ್ದಾರೆ.
Published: 12th March 2023 09:57 AM | Last Updated: 12th March 2023 10:30 AM | A+A A-

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ
ಬೆಂಗಳೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಇನ್ನು ಕೆಲವೇ ಕ್ಷಣಗಳಲ್ಲಿ ಉದ್ಘಾಟಿಸಲಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲೆಲ್ಲೂ ಕಟೌಟ್, ಬ್ಯಾನರ್ ಗಳು ರಾರಾಜಿಸುತ್ತಿವೆ. ಇಂದು ಪ್ರಧಾನಿಯನ್ನು ಸಂಸದೆ ಸುಮಲತಾ ಸ್ವಾಗತಿಸಲಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಬಳಿಕ ಮೊದಲ ಬಾರಿ ಮಂಡ್ಯಕ್ಕೆ ಮೋದಿ ಭೇಟಿ ನೀಡುತ್ತಿದ್ದಾರೆ. ಸಹಜವಾಗಿ ಒಕ್ಕಲಿಗ ಸಮುದಾಯ ಪ್ರಾಬಲ್ಯವಾಗಿರುವ ಸಕ್ಕರೆ ನಾಡಿನಲ್ಲಿ ಸುಮಲತಾ ಸೇರ್ಪಡೆ ಕಮಲ ಪಾಳಯಕ್ಕೆ ಬಲ ಬಂದಂತಾಗಿದೆ.
ಮೋದಿ ಆಗಮನ ಹಿನ್ನಲೆಯಲ್ಲಿ ಲಕ್ಷಗಟ್ಟಲೆ ಜನಕ್ಕೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಎರಡೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಪಲಾವ್, ಮೊಸರನ್ನ, ಗೋಧಿ ಪಾಯಸ, ಉಪ್ಪಿಟ್ಟು, ಕೇಸರಿ ಬಾತ್ ಇರಲಿದೆ.
ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುಮಲತಾ ಅಂಬರೀಷ್, ಜನ ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ಇದ್ದಾರೆ. ಬದಲಾವಣೆ ಗಾಳಿ ಮೇಲ್ನೋಟಕ್ಕೆ ಕಾಣುತ್ತಿಲ್ಲ ಜನರ ಮನಸ್ಸಿನಲ್ಲಿ ಇದೆ. ಮಂಡ್ಯದಲ್ಲಿ ಮೋದಿ 1.8 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ಗೆಜ್ಜಲಗೆರೆ ಕಾಲೋನಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಗೆಜ್ಜಲಗೆರೆಯಲ್ಲಿ ಪ್ರಧಾನಿ ಮೋದಿ ಸ್ವಾಗತ ಮಾಡಲಿದ್ದೇವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10.55ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 11.20ಕ್ಕೆ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ. ಬಳಿಕ ಮಂಡ್ಯದ ಪ್ರವಾಸಿಮಂದಿರ ವೃತ್ತದಿಂದ ನಂದ ಸರ್ಕಲ್ವರೆಗೆ ರೋಡ್ಶೋ ನಡೆಯಲಿದೆ. 11.40ಕ್ಕೆ ಹನಕೆರೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಉದ್ಘಾಟನೆ ಮಾಡಲಿದ್ದಾರೆ.
ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿ ಬೈಜತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಮಧ್ಯಾಹ್ನ 12.15 ರಿಂದ 1.15ರ ವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನ ಮಂಡ್ಯದಲ್ಲಿ ಜನರ ಗಮನ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಒಂದೂವರೆ ಕಿಲೋ ಮೀಟರ್ಗೂ ಹೆಚ್ಚಿನ ಉದ್ದದ ರೋಡ್ ಶೋ ನಡೆಸಲಿದ್ದಾರೆ.
ಇಂದು ಮಧ್ಯಾಹ್ನ 12ಕ್ಕೆ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ @narendramodi ಅವರು ಬೆಂಗಳೂರು ಮೈಸೂರು NH 275 ಲೋಕಾರ್ಪಣೆ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
— Sumalatha Ambareesh
ಇಂಥದ್ದೊಂದು ಐತಿಹಾಸಿಕ ಕಾರ್ಯಕ್ರಮ ನನ್ನ ಮಂಡ್ಯ ಕ್ಷೇತ್ರದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ನನ್ನ ಸ್ವಾಭಿಮಾನಿ ಮಂಡ್ಯದ ಎಲ್ಲ ಜನತೆಗೆ ಪ್ರೀತಿಯ ಆಹ್ವಾನ. pic.twitter.com/AAb3VZhUvI