ಬೆಂಗಳೂರು: ಬಾಂಬ್ ಮತ್ತು ಮದ್ದುಗುಂಡುಗಳನ್ನು ಬಳಸದ ಭಯೋತ್ಪಾದನೆಯ ಹೊಸ, ವಿಷಕಾರಿ ರೂಪವನ್ನು ಕೇರಳ ಸ್ಟೋರಿ ಬಹಿರಂಗಪಡಿಸುತ್ತದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ ‘ದಿ ಕೇರಳ ಸ್ಟೋರಿ‘ ಸಿನಿಮಾವನ್ನು ವೀಕ್ಷಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ‘ಕೇರಳದ ಭಯಾನಕ ವ್ಯವಸ್ಥೆಯು ‘ದಿ ಕೇರಳ ಸ್ಟೋರಿ‘ ಸಿನಿಮಾದಲ್ಲಿದೆ‘ ಎಂದರು. ಬಂದೂಕು, ಪಿಸ್ತೂಲ್ ಆತಂಕವಾದದ ಜೊತೆಗೂಡಿವೆ. ಇನ್ನೊಂದು ಪ್ರಮುಖ ರೀತಿಯ ನೂತನ ಭಯಾನಕ ಭಯೋತ್ಪಾದನೆಯ ವ್ಯವಸ್ಥೆಯನ್ನು 'ಕೇರಳ ಸ್ಟೋರಿ' ಅನಾವರಣಗೊಳಿಸಿದೆ ಎಂದು ತಿಳಿಸಿದರು
ಹೊಸ ಥರದ ಆತಂಕವಾದದ ಬಗ್ಗೆ ಈ ಸಿನಿಮಾ ಮಾಹಿತಿ ಕೊಡುತ್ತಿದೆ. ಯುವ ಜನರನ್ನು ಪ್ರಾಯೋಜಿತ ರೀತಿಯಲ್ಲಿ ಆತಂಕವಾದದತ್ತ ಸೆಳೆಯುವುದನ್ನು ಈ ಸಿನಿಮಾ ತೋರಿಸುತ್ತದೆ.ಭಯೋತ್ಪಾದನೆಯ ದಾರಿಯಲ್ಲಿ ನಡೆದ ಯುವಜನರು ಮತ್ತೆ ಹಿಂತಿರುಗಲಾಗದ ಹಂತ ತಲುಪುತ್ತಾರೆ‘ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಈ ಸಿನಿಮಾ ವೀಕ್ಷಿಸಿ ಸಮಾಜದ ಹೆಚ್ಚು ಹೆಚ್ಚು ಜನರು ಈ ಷಡ್ಯಂತ್ರದ ಕುರಿತು ಜಾಗೃತಗೊಳ್ಳಲಿ. ಇದಕ್ಕೆ ಧರ್ಮ, ಒಂದು ರಾಜ್ಯ ಎಂಬ ಸೀಮಿತತೆ ಇಲ್ಲ. ಕೇರಳದ ಈ ಗಂಭೀರ ಸಮಸ್ಯೆ ಕುರಿತು ಅಲ್ಲಿನ ಮಾಜಿ ಮುಖ್ಯಮಂತ್ರಿಯೂ ಆತಂಕ ಸೂಚಿಸಿದ್ದಾರೆ‘ ಎಂದರು. ‘ನಮ್ಮ ಸಮಾಜವನ್ನು ದುರ್ಬಲಗೊಳಿಸಲು ನಡೆಯುವ ಷಡ್ಯಂತ್ರದ ವಿಷಯವನ್ನು ಇದು ತಿಳಿಸಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್, ಸಂಸದ ತೇಜಸ್ವಿಸೂರ್ಯ, ರಾಷ್ಟ್ರೀಯ ವಕ್ತಾರ ಜಾಫರ್ ಇಸ್ಲಾಂ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರೂ ನಡ್ಡಾ ಅವರ ಜೊತೆ ಈ ಸಿನಿಮಾ ವೀಕ್ಷಿಸಿದರು.
ಕಳೆದ ತಿಂಗಳು ಚಿತ್ರದ ಟ್ರೇಲರ್ ಬಿಡುಗಡೆಯಾದ ಕೂಡಲೇ ಭಾರೀ ಸದ್ದು ಮಾಡಿತ್ತು. ಕೇರಳದಲ್ಲಿ ಮಹಿಳೆಯರ ಬಲವಂತದ ಮತಾಂತರದ ಮೇಲೆ ಚಿತ್ರವು ಗಮನ ಸೆಳೆಯುತ್ತದೆ ಎಂದು ನಿರ್ದೇಶಕರು ಹೇಳಿದ್ದರು. ಆಡಳಿತಾರೂಢ ಸಿಪಿಎಂ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಜನರನ್ನು ವಿಭಜಿಸುವ "ಬಿಜೆಪಿ ಪ್ರಾಯೋಜಿತ" ಪ್ರಯತ್ನ ಎಂದು ಆರೋಪಿಸಿದರು.
Advertisement