ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಡಿ ಚಿಕ್ಕನಹಳ್ಳಿಯ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಶುಚಿಗೊಳಿಸುವಾಗ 2ನೇ ತರಗತಿ ವಿದ್ಯಾರ್ಥಿನಿಗೆ ಆ್ಯಸಿಡ್ ಸಿಡಿಸಿದ ಆರೋಪದ ಮೇಲೆ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.
ಮುಖ್ಯ ಶಿಕ್ಷಕ ಜಿ ರಂಗಸ್ವಾಮಿ ಅವರು ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಸಿಂಚನಾ ಮೇಲೆ ಎರಚಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮುಖ್ಯ ಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪ್ರಕರಣದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ ವರದಿಯನ್ನು ಆಧರಿಸಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರವಿಶಂಕರ್ ಅವರು ರಂಗಸ್ವಾಮಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮುಖ್ಯಶಿಕ್ಷಕ ರಂಗಸ್ವಾಮಿ ಅವರು ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದರು. ಆದರೆ ಟಾಯ್ಲೆಟ್ ಒಂದನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದನ್ನು ಕಂಡು ರಂಗಸ್ವಾಮಿ ಅವರು ತಾವೇ ಕ್ಲೀನ್ ಮಾಡಲು ಆರಂಭಿಸಿ, ಆ್ಯಸಿಡ್ ಅನ್ನು ನೆಲದ ಮೇಲೆ ಎರಚಿದ್ದಾರೆ. ಈ ವೇಳೆ ಅಲ್ಲಿಯೇ ನಿಂತಿದ್ದ ಬಾಲಕಿಗೆ ಆ್ಯಸಿಡ್ ಸಿಡಿದಿದೆ.
Advertisement