ಕನ್ನಡ ರಾಜ್ಯೋತ್ಸವ: ನ.1ರಂದು 'ಕರಾಳ ದಿನ' ಆಚರಣೆಗೆ ಎಂಇಎಸ್ ನಿರ್ಧಾರ; ಮಹಾ ಸಿಎಂ ಏಕನಾಥ್ ಶಿಂಧೆ ಬೆಂಬಲ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಳೆಯದು. ಪ್ರತಿ ವರ್ಷ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಆಗಮಿಸುತ್ತಿದ್ದಂತೆ ನೆರೆಯ ಮಹಾರಾಷ್ಟ್ರ ಗಡಿ ಜಿಲ್ಲೆ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆಯುತ್ತಲೇ ಇರುತ್ತದೆ.
ಕನ್ನಡ ರಾಜ್ಯೋತ್ಸವದ ಸಾಂದರ್ಭಿಕ ಚಿತ್ರ
ಕನ್ನಡ ರಾಜ್ಯೋತ್ಸವದ ಸಾಂದರ್ಭಿಕ ಚಿತ್ರ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಳೆಯದು. ಪ್ರತಿ ವರ್ಷ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಆಗಮಿಸುತ್ತಿದ್ದಂತೆ ನೆರೆಯ ಮಹಾರಾಷ್ಟ್ರ ಗಡಿ ಜಿಲ್ಲೆ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಅದರಂತೆ ಈ ಬಾರಿಯು ಕೂಡ ಮಹಾರಾಷ್ಟ್ರ ಏಕೀಕರಣ ಸಮಿತಿ(MES) ವತಿಯಿಂದ ನವೆಂಬರ್ 1 ರಂದು ಕರಾಳ ದಿನಾಚರಣೆ ಆಚರಿಸಲು ನಿರ್ಧರಿಸಿದ್ದು, ಇದಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬೆಂಬಲ ಸೂಚಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬೆಂಬಲ: ಈ ಕರಾಳ ದಿನಾಚಾರಣೆಗೆ ಪ್ರತಿನಿಧಿಗಳನ್ನು ಕಳಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆ ನೀಡಿದ್ದಾರೆ. ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಬೆಂಬಲ ಸೂಚಿಸಿದ್ದಾರೆ. ಕರಾಳ ದಿನಾಚರಣೆಗೆ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಅನುಮತಿಯನ್ನು ನೀಡಿಲ್ಲ.

ನವೆಂಬರ್ 1 ರಂದು ಕರಾಳ ದಿನ ಆಚರಣೆ ಮಾಡದಂತೆ ಎಂಇಎಸ್ ಕಾರ್ಯಕರ್ತರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿ ನಿತೀಶ್ ಎಚ್ಚರಿಕೆ ನೀಡಿದ್ದಾರೆ.ಅಲ್ಲದೆ ಮಹಾರಾಷ್ಟ್ರ ನಾಯಕರಿಗೂ ಬೆಳಗಾವಿ ಪ್ರವೇಶ ನಿರ್ಬಂಧಿಸುವ ಎಚ್ಚರಿಕೆಯನ್ನು ರಾಜೋತ್ಸವ ಪೂರ್ವಭಾವಿ ಸಭೆಯಲ್ಲಿ ಡಿಸಿ ನಿತೀಶ್ ಎಚ್ಚರಿಕೆ ನೀಡಿದ್ದರು.

ಮಹಾರಾಷ್ಟ್ರ ನಾಯಕರನ್ನು ಕರಾಳ ದಿನಾಚರಣೆಗೆ ಕಳುಹಿಸುವುದಾಗಿ ಸಿಎಂ ಶಿಂಧೆ ಹೇಳಿರುವ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡರು ಸಭೆ ಕರೆದು ಕರಾಳ ದಿನಾಚರಣೆ ಕುರಿತು ಚರ್ಚೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯೊಳಗೆ  ಸಂಸದ ಧೈರ್ಯಶೀಲ ಮಾನೆ, ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರನ್ನು ಕರೆತರಲು ಯೋಜನೆ ಮಾಡಿಕೊಂಡಿದ್ದಾರೆ.

ಕರಾಳ ದಿನಾಚರಣೆಗೆ ಅವಕಾಶ ಕೊಡಬಾರದು: ಗಡಿ ಭಾಗದಲ್ಲಿ ಮಹಾರಾಷ್ಟ್ರ ಸರ್ಕಾರ ಕಚೇರಿ ಆರಂಭ ಮಾಡುತ್ತಿದೆ. ಇದರಿಂದ ಗಡಿ ಭಾಗದ ಮರಾಠಿಗರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಕೂಡಲೇ ಸರ್ಕಾರದ ಗಮನಕ್ಕೆ ತಂದು ಅದಕ್ಕೆ ತಡೆ ಹಾಕಬೇಕು. ಕರಾಳ ದಿನಾಚರಣೆಗೆ ಅವಕಾಶ ಕೊಡಬಾರದು. ಡಿಸಿ ಮೂಲಕ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ರಾಜ್ಯ ಸಂಚಾಲಕ ಮಹಾದೇವ ತಳವಾರ ಮನವಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com