ಮೈಸೂರು: ನಮಗೆ ಅಧಿಕಾರ ಮುಖ್ಯವಲ್ಲ, ರಾಜ್ಯದ ರೈತರ ಹಿತ ಮುಖ್ಯ, ರಾಜ್ಯದ ಜನತೆಯ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆ ಬಿದ್ದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಬಂದ್ ಮಾಡಬಾರದು ಎಂದು ನಾವು ಹೇಳುವುದಿಲ್ಲ, ನಾವು ಅಡ್ಡಿಪಡಿಸಲು ಹೋಗುವುದಿಲ್ಲ, ಆದರೆ ಸಾರ್ವಜನಿಕರಿಗೆ ತೊಂದರೆ ಮಾಡುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಮಾಡಬೇಡಿ ಎಂದು ಕೇಳಿಕೊಂಡರು.
ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿಯಲ್ಲಿರುವ 25 ಸಂಸದರು ಕೇಂದ್ರ ಸರ್ಕಾರದ ಮುಂದೆ, ಪ್ರಧಾನಿಯವರ ಮುಂದೆ ಒತ್ತಡ ಹಾಕಬೇಕೆಂದು ನಾವು ಕೇಳಿಕೊಳ್ಳುತ್ತೇವೆ. ಇಂತಹ ಸಂದರ್ಭಗಳಲ್ಲಿ ಪ್ರಧಾನ ಮಂತ್ರಿಗಳು ಮಧ್ಯೆ ಪ್ರವೇಶಿಸಬೇಕು ಎಂದು ಸಿಎಂ ಒತ್ತಾಯಿಸಿದರು.
ಬಿಜೆಪಿಯವರು ಚಡ್ಡಿ ಹಾಕಿಕೊಂಡು ಪ್ರತಿಭಟನೆ, ಮೆರವಣಿಗೆ ಮಾಡುವ ಬದಲು ಪ್ರಧಾನಿ ಮೇಲೆ ಒತ್ತಡ ಹಾಕಿ ಮಾತುಕತೆ ಮೂಲಕ ಕರ್ನಾಟಕ-ತಮಿಳು ನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ಒತ್ತಡ ಹೇರಬೇಕೆಂದು ಕೇಳಿಕೊಂಡರು.
ಸುಪ್ರೀಂ ಕೋರ್ಟ್ ಮುಂದೆ ಸರ್ಕಾರ ಸರಿಯಾಗಿ ವಾದ ಮಂಡಿಸಲಿಲ್ಲ ಎಂಬ ವಿಪಕ್ಷ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ವಿಪಕ್ಷಗಳ ಆಡಳಿತ ಸಮಯದಲ್ಲಿಯೂ ಇದೇ ಕಾನೂನು ತಂಡ ಕೋರ್ಟ್ ಮುಂದೆ ವಾದ ಮಂಡಿಸಿತ್ತು. ದೇವೇಗೌಡರ ಕಾಲದಲ್ಲಿ, ಬಿಜೆಪಿ ಕಾಲದಲ್ಲಿ ಕೂಡ ಇದೇ ಕಾನೂನು ತಂಡ ಇದ್ದಿತ್ತು.
ಕಾವೇರಿ ನಿರ್ವಹಣಾ ಪ್ರಾಧಿಕಾರ ಮುಂದೆ ನಾವು ಬಹಳ ಸಮರ್ಥವಾಗಿ ನಮ್ಮ ವಾಸ್ತವ ಪರಿಸ್ಥಿತಿಯನ್ನು ಮಂಡಿಸಿದ್ದರೂ ಕೂಡ 5 ಸಾವಿರ ಕ್ಯೂಸೆಕ್ ಬಿಡುಗಡೆ ಮಾಡಬೇಕೆಂದು ಹೇಳಿದ್ದಾರೆ ಮತ್ತೆ ಕರ್ನಾಟಕ ಪ್ರಾಧಿಕಾರ ಮುಂದೆ ವಾದ ಮಂಡಿಸಲಿದೆ ಎಂದರು.
ನನಗೆ ಮೂಢನಂಬಿಕೆ ಇಲ್ಲ, ನಾಳೆ ಚಾಮರಾಜನಗರಕ್ಕೆ ಹೋಗುತ್ತಿದ್ದೇನೆ, ಅಧಿಕಾರದಲ್ಲಿ ಗಟ್ಟಿಯಾಗಿ ಇರುತ್ತೇನೆ ಎಂದರು.
Advertisement