ಉಡುಪಿ: ವಿದ್ಯುತ್ ಸ್ಪರ್ಶಿಸಿ ದಂಪತಿ ದುರ್ಮರಣ!
ಉಡುಪಿ: ಮುರಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪತಿ-ಪತ್ನಿ ಮೃತಪಟ್ಟಿರುವ ಘಟನೆ ಕುಂದಾಪುರ ಹೆಮ್ಮಾಡಿ ಸಮೀಪದ ಸುಳ್ಸೆ ಕರಣಿಕರ ಮನೆ ಬಳಿ ನಡೆದಿದೆ. ಮಹಾಬಲ ದೇವಾಡಿಗ(55), ಪತ್ನಿ ಲಕ್ಷ್ಮಿ ದೇವಾಡಿಗ(49) ಮೃತರು.
ಮೃತರನ್ನು ಮಹಾಬಲ ದೇವಾಡಿಗ (55) ಮತ್ತು ಅವರ ಪತ್ನಿ ಲಕ್ಷ್ಮಿ (48) ಎಂದು ಗುರುತಿಸಲಾಗಿದೆ. ಅವರು ಸುಳ್ಸೆಯ ಯಕ್ಷಿ ಬ್ರಹ್ಮ ನಂದಿಕೇಶ್ವರ ದೇವಸ್ಥಾನದ ಬಳಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮಹಾಬಲ ದೇವಾಡಿಗ ದಿನಗೂಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪತಿ ಮನೆಗೆ ಬಾರದಿರುವುದನ್ನು ಗಮನಿಸಿದ ಲಕ್ಷ್ಮಿ ತನ್ನ ಪತಿಯನ್ನು ಹುಡುಕಿಕೊಂಡು ಹೋದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದನ್ನು ನೋಡಿದ್ದಾಳೆ. ಪತಿಯನ್ನು ರಕ್ಷಿಸಲು ಹೋಗಿ ಆಕೆಯು ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ಬೀದರ್: ಗೋಡೆ ಕುಸಿದು 8 ವರ್ಷದ ಬಾಲಕಿ ಸಾವು
ತುಂಡಾಗಿದ್ದ ತಂತಿಯನ್ನು ಕೆಳಗೇ ಬಿಟ್ಟು ನಿರ್ಲಕ್ಷ್ಯ ತೋರಿದ ಮೆಸ್ಕಾಂ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಈಗಿರುವ ತಂತಿ 30 ರಿಂದ 35 ವರ್ಷಗಳಷ್ಟು ಹಳೆಯದಾಗಿದ್ದು, ಈ ಬಗ್ಗೆ ಮೆಸ್ಕಾಂನಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಬದಲಾಯಿಸಿಲ್ಲ ಎಂದು ಆರೋಪಿಸಿದ್ದಾರೆ.
ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಶಾಲೆಗೆ ಬೇಗ ತಲುಪಲು ದೂರ ಕಡಿಮೆ ಮಾಡಲು ಇದೇ ಮಾರ್ಗ ಬಳಸುತ್ತಾರೆ . ಕೂಡಲೇ ಮೆಸ್ಕಾಂ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಗೋಪಾಲ ಪೂಜಾರಿ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಮತ್ತಿತರರು ಭೇಟಿ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ