ಬೆಂಗಳೂರು: ವಿಜಯಪುರದ ವಿಜೇತಾ ಭೋಸಮಣಿ ಅವರು 2023 ರ ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಯಲ್ಲಿ 100 ನೇ ರ್ಯಾಂಕ್ ಗಳಿಸಿದ್ದಾರೆ, 2023ನೇ ಸಾಲಿನ ಯುಪಿಎಸ್ ಸಿ ಫಲಿತಾಂಶ ನಿನ್ನೆ ಮಂಗಳವಾರ ಪ್ರಕಟವಾಗಿದೆ.
ದೇಶದ ಕಟ್ಟಕಡೆಯ ಸಮುದಾಯದ ಬದುಕಿನಲ್ಲಿ ಬದಲಾವಣೆ ತರಲು ಕೆಲಸ ಮಾಡುವ ಉತ್ಸಾಹ ಹೊಂದಿರುವ ವಿಜೇತಾ ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಬಗ್ಗೆ ಉತ್ಸುಕರಾಗಿದ್ದಾರೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿದ ಪೋಷಕರ ಪುತ್ರಿ ವಿಜೇತಾ ಅವರು ಪ್ರಾಣಿಗಳ ಕಲ್ಯಾಣಕ್ಕೆ ಕೊಡುಗೆ ನೀಡುವ ಆಶಯ ಹೊಂದಿದ್ದಾರೆ. ನಾಲ್ಕನೇ ಬಾರಿಯ ಪ್ರಯತ್ನದಲ್ಲಿ ವಿಜೇತಾ ಯಶಸ್ವಿಯಾಗಿದ್ದಾರೆ.
ದಾವಣಗೆರೆಯಲ್ಲಿ ನರ್ಸರಿ ಹೊಂದಿರುವ ಕೃಷಿಕರೊಬ್ಬರ ಪುತ್ರಿ, 23 ವರ್ಷದ ಸೌಭಾಗ್ಯ ಎಸ್ ಬೀಳಗಿಮಠ ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆಗೆ ಪ್ರತಿದಿನ 12 ಗಂಟೆಗಳ ತೀವ್ರ ಅಧ್ಯಯನ ನಡೆಸಿ ಫಲ ನೀಡಿತು.
ತಮ್ಮ ತಂದೆ ಮಾಡುತ್ತಿರುವ ಕೆಲಸಗಳನ್ನು ನೋಡಿ ಬೆಳೆದಿರುವ ಸೌಭಾಗ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯಂತಹ ಕ್ಷೇತ್ರಗಳಿಗೆ ಕೊಡುಗೆ ನೀಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ಸಂದರ್ಭದಲ್ಲಿ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಂತಪ್ಪ ಕುರುಬರ ಅವರು 644ನೇ ರ್ಯಾಂಕ್ ಗಳಿಸಿದ್ದಾರೆ. ಪ್ರಸ್ತುತ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಕೆಲಸ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು.
ಕರ್ನಾಟಕದ ಸುಮಾರು 40 ಅಭ್ಯರ್ಥಿಗಳು UPSC 2023 ಪರೀಕ್ಷೆಗಳನ್ನು ಯಶಸ್ವಿಯಾಗಿ ತೇರ್ಗಡೆ ಮಾಡಿ ಹುದ್ದೆಗಳಿಗೆ ಎದುರು ನೋಡುತ್ತಿದ್ದಾರೆ. ಈ ವರ್ಷ ಒಟ್ಟು 1,016 ಅಭ್ಯರ್ಥಿಗಳನ್ನು UPSC ನೇಮಕಾತಿಗೆ ಶಿಫಾರಸು ಮಾಡಿದೆ.
Advertisement