ಲವ್ ಜಿಹಾದ್ ಹರಡುತ್ತಿದೆ, ನಿಮ್ಮ ಹೆಣ್ಣುಮಕ್ಕಳನ್ನು ನೋಡಿಕೊಳ್ಳಿ: ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೊರೇಟರ್, ಹತ್ಯೆಯಾದ ನೇಹಾ ತಂದೆ ಮನವಿ
ಹುಬ್ಬಳ್ಳಿ: ಲವ್ ಜಿಹಾದ್ ವೇಗವಾಗಿ ಹರಡುತ್ತಿದೆ ಎಂದು ಕಾಂಗ್ರೆಸ್ ಕಾರ್ಪೊರೇಟರ್ ಹಾಗೂ ಗುರುವಾರ ಹತ್ಯೆಗೀಡಾದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ತಂದೆ ನಿರಂಜನ್ ಹಿರೇಮಠ ಅವರು ಶುಕ್ರವಾರ ಹೇಳಿದ್ದಾರೆ.
ಕಾಲೇಜಿಗೆ ಹೋಗುವ ತಮ್ಮ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ದುಃಖತಪ್ತ ತಂದೆ, ಇತರ ತಾಯಂದಿರಲ್ಲಿ ಮನವಿ ಮಾಡಿದ್ದಾರೆ.
ಹತ್ಯೆಯ ಹಿಂದಿನ ಅಜೆಂಡಾ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರಂಜನ್ ಹಿರೇಮಠ್, “ಹೌದು. ಆ ನಿಟ್ಟಿನಲ್ಲಿ ಘಟನೆಗಳು ನಡೆಯುತ್ತಿವೆ. ನಮ್ಮ ಸುತ್ತಮುತ್ತಲಿನ ಘಟನೆಗಳನ್ನು ನೋಡಿದಾಗ ಕ್ರೌರ್ಯ ಹೆಚ್ಚುತ್ತಿದೆ. ಈ ಯುವಕರು ಏಕೆ ತಪ್ಪು ದಾರಿ ಹಿಡಿಯುತ್ತಿದ್ದಾರೆ ಮತ್ತು ಅಂತಹ ಮನಸ್ಥಿತಿಯನ್ನು ಏಕೆ ಹೊಂದಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಯಾವುದೇ ಹೆಣ್ಣುಮಕ್ಕಳು ಈ ರೀತಿಯ ಆಘಾತಕ್ಕೆ ಒಳಗಾಗಬಾರದು ಎಂಬುದು ನಮ್ಮ ಕಳಕಳಿಯಾಗಿದೆ. ‘ಲವ್ ಜಿಹಾದ್’ ವೇಗವಾಗಿ ಹರಡುತ್ತಿದೆ ಎಂದು ನನಗೆ ಅನಿಸುತ್ತಿದೆ. ನಾನು ಎಲ್ಲಾ ತಾಯಂದಿರಲ್ಲಿ ಮನವಿ ಮಾಡುತ್ತೇನೆ, ನೀವು ನಿಮ್ಮ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಿದ್ದರೆ, ನೀವು ಸಹ ಅವರೊಂದಿಗೆ ಹೋಗಬೇಕು ಮತ್ತು ಯಾರೂ ಅವರನ್ನು ಅನುಸರಿಸದಂತೆ ನೋಡಿಕೊಳ್ಳಬೇಕು. ನಮಗೆ ಏನಾಯಿತು, ಅದು ಬೇರೆ ಯಾರಿಗೂ ಆಗಬಾರದು ಎಂದಿದ್ದಾರೆ.
ನಿರಂಜನ ಹಿರೇಮಠ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಎಲ್ಲ ರಂಗಗಳಲ್ಲಿಯೂ ಮಹಿಳೆಯರು ಮುಂದಿದ್ದಾರೆ. ವಿಷಯಗಳು ಇದೇ ರೀತಿ ಮುಂದುವರಿದರೆ, ಪರಿಸ್ಥಿತಿ ಏನಾಗಬಹುದು? ಎಂದು ಪ್ರಶ್ನಿಸಿದರು.
“ಪ್ರಕರಣದ ತನಿಖೆಯ ಬಗ್ಗೆ ನಮಗೆ ಎಲ್ಲಾ ಮಾಹಿತಿಯನ್ನು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ಎಲ್ಲ ಮುಖಂಡರಲ್ಲಿ ಮನವಿ ಮಾಡುತ್ತೇನೆ ಎಂದು ನಿರಂಜನ ಹಿರೇಮಠ ಹೇಳಿದ್ದಾರೆ.
ನಿರಂಜನ ಅವರ ಈ ಹೇಳಿಕೆ ರಾಜ್ಯದಲ್ಲಿ ಚರ್ಚೆ ಮತ್ತು ವಿವಾದವನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ಏಕೆಂದರೆ ಕಾಂಗ್ರೆಸ್ ಸರ್ಕಾರ, ವೈಯಕ್ತಿಕ ಕಾರಣಗಳಿಂದಾಗಿ ಹತ್ಯೆ ನಡೆದಿದೆ ಮತ್ತು ಮೃತ ನೇಹಾ ಮತ್ತು ಆರೋಪಿ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಇದು ಲವ್ ಜಿಹಾದ್ ಅಲ್ಲ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ