ಹುಬ್ಬಳ್ಳಿ: ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಪುತ್ರಿ ನೇಹಾ ಹತ್ಯೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಆರೋಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಮಧ್ಯೆ ನನ್ನ ಮಗ ಮಾಡಿರುವುದು ಕ್ಷಮಿಸಲಾರದಂತ ಹೀನ ಕೃತ್ಯ ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆರೋಪಿ ಫಯಾಜ್ ತಂದೆ ಕಣ್ಣೀರು ಹಾಕಿದ್ದಾರೆ.
ನನ್ನ ಮಗ ಮಾಡಿದ ತಪ್ಪಿಗೆ ನಾನು ಮುನವಳ್ಳಿ ಹಾಗೂ ರಾಜ್ಯದ ಜನರ ಬಳಿ ಕ್ಷಮೆ ಕೇಳುತ್ತೇನೆ ಎಂದು ಬಾಬಾ ಸಾಹೇಬ್ ಸುಬಾನಿ ಹೇಳಿದ್ದಾರೆ. ದಯವಿಟ್ಟು ಯಾರೇ ಆಗಲಿ ನನ್ನ ಮಗನ ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಬೇಡಿ ಎಂದು ಕಣ್ಣೀರು ಹಾಕಿದ್ದಾರೆ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೆ ಈಗ ನನ್ನ ಮಗ ದೇಶದ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಿಬಿಟ್ಟಿದ್ದಾನೆ. ಆತನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ನನ್ನ ಮಗನನ್ನು ಭಾರತೀಯ ಸೇನೆಗೆ ಸೇರಿಬೇಕು ಎಂಬ ಆಸೆ ನನ್ನದಾಗಿತ್ತು. ಆದರೆ ಇಂದು ಆತ ಕ್ಷಮಿಸಲಾರದ ತಪ್ಪು ಮಾಡಿದ್ದಾನೆ. ಅವನಿಗೆ ಯಾವ ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆ. ಮುಂದೆ ಯಾವ ಹೆಣ್ಮಕ್ಕಳ ಮೇಲೆ ಯಾರೂ ಕೈ ಮಾಡಬಾರದು. ಇವನಿಗೆ ಕೊಡುವ ಶಿಕ್ಷೆಯಿಂದ ಅಂತಹ ಭಯ ಜನರಲ್ಲಿ ಮೂಡಬೇಕು. ಆ ರೀತಿಯ ಶಿಕ್ಷೆಯನ್ನು ನೀಡಲಿ ಎಂದು ಹೇಳುತ್ತಾ ನೇಹಾ ತಂದೆ ಹಾಗೂ ರಾಜ್ಯದ ಜನರ ಬಳಿ ಕ್ಷಮೆಯಾಚಿಸಿದ್ದಾರೆ.
Advertisement