ಬೆಳಗಾವಿ: ಕರ್ನಾಟಕದ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಇತರ ಸಂಬಂಧಿಕರೊಂದಿಗೆ ಸೇರಿ ತಮ್ಮ ಸ್ವಂತ ಊರಿನಲ್ಲಿ ಮಹಿಳೆ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಗಳಿ ಗ್ರಾಮದ ನಕುಶಾ ಸೈದಪ್ಪ ಗಡಾದೆ ಎಂಬುವವರು ಐಗಳಿ ಠಾಣೆಗೆ ತಮ್ಮ ಮೇಲೆ ಕಿರುಕುಳ ಹಾಗೂ ಹಲ್ಲೆ ನಡೆದಿರುವ ಬಗ್ಗೆ ದೂರು ಸಲ್ಲಿಸಿದ್ದು ಐಪಿಸಿ 307 ಸೇರಿ ಇತರ ಕಲಂಗಳ ಅಡಿ 14ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಐಗಳಿ ಗ್ರಾಮದ ಸಾರ್ವಜನಿಕ ಕುಡಿಯುವ ಬಾವಿ ನೀರನ್ನು, ಸ್ಥಳೀಯ ಗ್ರಾ.ಪಂ. ಅನುಮತಿ ಮೇರೆಗೆ ಹೊಸ ಮನೆ ಕಟ್ಟುವ ಕೆಲಸಕ್ಕೆ ಬಳಕೆ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಕ್ಯಾತೆ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಒಟ್ಟು 14 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಐಪಿಎಸ್ ಅಧಿಕಾರಿ ರವೀಂದ್ರ ಗಡಾಡಿ ಆರೋಪಿ ನಂಬರ್ ಒನ್ ಆರೋಪಿಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಈ ಆರೋಪಿಗಳು ದಂಪತಿ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಐಗಳಿ ಗ್ರಾಮದ ನಿವಾಸಿ ನಕುಶಾ ಸೈದಪ್ಪ ಗಡಡೆ (37) ಎಂಬುವರು ನೀಡಿದ ದೂರಿನಲ್ಲಿ ಆಕೆಯ ಕುಟುಂಬವು ಗ್ರಾಮದಲ್ಲಿ ಮನೆ ನಿರ್ಮಿಸುತ್ತಿದೆ. ಕಾಮಗಾರಿಗೆ ನೀರು ಬೇಕಾಗಿರುವುದರಿಂದ ತಮ್ಮ ಪ್ರದೇಶದ ಸಾರ್ವಜನಿಕರಿಗೆ ತೆರೆದ ಬಾವಿಯ ನೀರನ್ನೇ ಬಳಸುತ್ತಿದ್ದರು. ಆದರೆ ಆರೋಪಿ ರವೀಂದ್ರ ಗಡಾಡಿ ಹಾಗೂ ಇತರರು ಬಾವಿಯಿಂದ ನೀರು ತರಲಾಗದಂತೆ ತೆರೆದ ಬಾವಿಗೆ ನೆಟ್ ಕಟ್ಟಿ ತೆರೆದ ಬಾವಿಯನ್ನು ಮುಚ್ಚಿದ್ದರು.
ಆದರೆ, ಆಕೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ ನಂತರ ಗ್ರಾಮ ಪಂಚಾಯಿತಿಯವರು ಶೆಡ್ ನೆಟ್ ತೆಗೆದು ಕುಟುಂಬಕ್ಕೆ ನೀರು ಬಳಸಲು ಅನುವು ಮಾಡಿಕೊಟ್ಟಿದ್ದಾರೆ. ಇದನ್ನು ಸಹಿಸಿಕೊಳ್ಳದ ಆರೋಪಿಗಳೆಲ್ಲರೂ ಪ್ಲಾನ್ ರೂಪಿಸಿ ಏಪ್ರಿಲ್ 14ರಂದು ಮಧ್ಯಾಹ್ನ ನಕುಶ ಸೈದಪ್ಪ ಗಡಡೆ ಮನೆಗೆ ತಲುಪಿದ್ದಾರೆ. ನಕುಶಾ, ಆಕೆಯ ಪತಿ ಸೈದಪ್ಪ ಗಡಡೆ ಮತ್ತು ಮಗ ರಾಜೇಂದ್ರ ಗಡಡೆ ಎಂಬುವವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.
ಆರೋಪಿಗಳು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಐಗಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Advertisement