ಅಪಹರಣ ಪ್ರಕರಣ: ಎಚ್ ಡಿ ರೇವಣ್ಣ ಜಾಮೀನು ರದ್ದತಿಗೆ ಎಸ್ಐಟಿ ಅರ್ಜಿ, ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಹಿರಿಯ ನಾಯಕ ಹೆಚ್ ಡಿ ರೇವಣ್ಣ ಅವರಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಆದೇಶವನ್ನು ರಾಜ್ಯ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ. ಅತ್ಯಾಚಾರದ ಆರೋಪದಲ್ಲಿ ಜೈಲಿನಲ್ಲಿರುವ ಶಾಸಕರ ಪುತ್ರ ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಾಕ್ಷಿ ಹೇಳುವುದನ್ನು ತಡೆಯಲು ಮಹಿಳೆಯನ್ನು ಕಿಡ್ನಾಪ್ ಮಾಡಲಾಗಿತ್ತು ಎನ್ನಲಾಗಿದೆ.
ಎಸ್ಐಟಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳ ತೀವ್ರತೆಯನ್ನು ಗಮನಿಸಿದರು. ಪ್ರಕರಣದ ಸತ್ಯಗಳು "ಗೋರಿ" ಆಗಿದ್ದು, ಶಾಸಕರು, ಸಂಸದರ ವಿಶೇಷ ನ್ಯಾಯಾಲಯದಿಂದ ಜಾಮೀನು ನೀಡಬಾರದು ಎಂದು ಹೇಳಿದರು.
ಎಸ್ಐಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ಪ್ರಕರಣದ ವಿವರಗಳನ್ನು ಮಂಡಿಸಿ, ಜಾಮೀನು ರದ್ದುಗೊಳಿಸುವಂತೆ ವಾದಿಸಿದರು. ಜಾಮೀನು ನೀಡಿರುವ ವಿಚಾರಣಾ ನ್ಯಾಯಾಲಯದ ತೀರ್ಪು ತಪ್ಪಾಗಿದ್ದು, ಅದನ್ನು ಹಿಂಪಡೆಯಬೇಕು ಎಂದು ಕೋರಿದರು.
ಎಚ್ ಡಿ ರೇವಣ್ಣ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ವಿ ನಾಗೇಶ್, ಸಂತ್ರಸ್ತೆ ಅಪ್ರಾಪ್ತೆಯಲ್ಲ .ಹೀಗಾಗಿ ಅಪಹರಣ ಆರೋಪ ಸಮರ್ಥನೀಯವಲ್ಲಾ, ಆಕೆ ಮನೆಯಲ್ಲಿ ಕೆಲಸದಲ್ಲಿದ್ದರು. ಹಾಗಾಗೀ ಅವರನ್ನು ಕರೆದಿದ್ದು, ಯಾವುದೇ ಮೋಸ ಆಗಿಲ್ಲ, ಬೆದರಿಕೆವೊಡ್ಡಿಲ್ಲ. ಬಂಧಿಸಿಲ್ಲ ಎಂದು ವಾದಿಸಿದರು.
ರೇವಣ್ಣ ಅಥವಾ ಅವರ ಪತ್ನಿ ಭವಾನಿ ರೇವಣ್ಣ ಅವರ ಒತ್ತಾಯದ ಮೇರೆಗೆ ಸಂತ್ರಸ್ತೆಯಾಗಿರುವ ಮನೆಕೆಲಸದಾಕೆಯನ್ನು ಅಪಹರಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ನಾಗೇಶ್ ಪ್ರತಿಪಾದಿಸಿದರು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ