
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಹೆಸರಿಗೆ ಮಾತ್ರ ಜೈಲು, ಅರಮನೆಯಲ್ಲಿದ್ದಂತೆ ರಾಜಾತಿಥ್ಯ ಸಿಗುತ್ತಿದೆ ಎಂದು ಫೋಟೋ-ವಿಡಿಯೊ ವೈರಲ್ ಆಗಿ ವಿವಾದವೆದ್ದು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ ನಟ ದರ್ಶನ್ ಗೆ ಅಲ್ಲಿ ಕೂಡ ವಿವಾದ ಬೆಂಬಿಡದ ಭೂತದಂತೆ ಕಾಡುತ್ತಿದೆ.
ಇಂದು ಬಳ್ಳಾರಿ ಜೈಲಿಗೆ ನಟ ದರ್ಶನ್ ಎಂಟ್ರಿಯಾಗುತ್ತಿದ್ದಂತೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಪ್ಯೂಮಾ ಬ್ರಾಂಡೆಡ್ ಟೀ ಶರ್ಟ್, ಕಪ್ಪು ಕೂಲಿಂಗ್ ಗ್ಲಾಸನ್ನು ಟೀ ಶರ್ಟಿಗೆ ಸಿಕ್ಕಿಸಿ ಎಡಗೈಯಲ್ಲಿ ಕ್ರೇಪ್ ಬ್ಯಾಂಡ್ ಧರಿಸಿ, ಬೆಡ್ ಶೀಟ್ ಸುತ್ತಿಕೊಂಡು, ಬಲಗೈಯಲ್ಲಿ ನೀರಿನ ಬಾಟಲ್ ಹಿಡಿದು ಮುಖದಲ್ಲಿ ಸ್ವಲ್ಪ ಆತಂಕ ಮತ್ತು ನಗುವಿನೊಂದಿಗೆ ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್ಗೆ ಎಂಟ್ರಿ ಕೊಟ್ಟಿದ್ದಾರೆ.ಆದರೀಗ ದರ್ಶನ್ ಅಷ್ಟು ಸ್ಟೈಲ್ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅನೇಕರು ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ಟರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇಷ್ಟೆಲ್ಲಾ ಸೌಲಭ್ಯಗಳೊಂದಿಗೆ ಅವರನ್ನು ಜೈಲಿನೊಳಗೆ ಬಿಡಲು ಅವಕಾಶ ಕೊಟ್ಟಿರುವುದೇಕೆ ಎಂದು ಪೊಲೀಸರು ಮತ್ತು ಜೈಲಿನ ಸಿಬ್ಬಂದಿಯನ್ನು ಪ್ರಶ್ನಿಸಲಾಗುತ್ತಿದೆ. ದರ್ಶನ್ ಜೈಲಿಗೆ ಎಂಟ್ರಿ ಆಗುವಾಗ ಬಿಗಿ ಭದ್ರತೆ ಆಯೋಜನೆ ಮಾಡಲಾಗಿತ್ತು.
ಪೊಲೀಸರ ಸಮ್ಮುಖದಲ್ಲಿ ಅವರು ಜೈಲಿನ ಒಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲು ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ.ಬಳ್ಳಾರಿಯಲ್ಲಿ ಜೈಲಿನ ನಿಯಮಗಳನ್ನ ಪಾಲನೆ ಮಾಡಲು ದರ್ಶನ್ಗೆ ಸೂಚನೆ ನೀಡಲಾಗಿದೆ. ಹೀಗಾಗಿಯೇ ದರ್ಶನ್ ಹಾಕಿದ್ದ ಬೆಳ್ಳಿ ಕಡಗ, ಸನ್ಗ್ಲಾಸ್, ಕತ್ತಿನಲ್ಲಿ ಹಾಕಿದ್ದ ಮಣಿ ಸರ ಹಾಗೂ ದಾರವನ್ನು ಪೊಲೀಸರು ಬಿಚ್ಚಿಸಿದ್ದಾರೆ.
ಕೈದಿ ನಂಬರ್ 511: ಜೈಲಾಧಿಕಾರಿಗಳು ದರ್ಶನ್ ಆಗಮನದ ಬಳಿಕ ಹೊಸ ಕೈದಿ ನಂಬರ್ ನೀಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ 6,106 ಕೈದಿ ನಂಬರ್ ನೀಡಲಾಗಿತ್ತು. ಆದರೆ ಬಳ್ಲಾರಿ ಜೈಲಿನಲ್ಲಿ 511 ಕೈದಿ ನಂಬರ್ ದರ್ಶನ್ಗೆ ಸಿಕ್ಕಿದೆ.
Advertisement