
ಬೆಂಗಳೂರು: ಮಾಜಿ ಸಿಎಂ SM Krishna ಇಹಲೋಕ ತ್ಯಜಿಸಿದ್ದು, ಗಣ್ಯರು ಅಗಲಿದ ನಾಯಕನಿಗೆ ಅಂತಿಮ ಗೌರವ ಸಲ್ಲಿಸುತ್ತಿದ್ದಾರೆ.
ಸದಾಶಿವ ನಗರದಲ್ಲಿರುವ ಎಸ್ಎಂಕೆ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಮದ್ದೂರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಎಸ್ಎಂ ಕೃಷ್ಣ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ್ದು, ತಮಗೆ ಟಿಕೆಟ್ ಕೈತಪ್ಪಿದಾಗ ಕರೆ ಮಾಡಿ ಮಾತನಾಡಿದ್ದ ಹಿರಿಯ ಮುತ್ಸದ್ದಿಯನ್ನು ಸ್ಮರಿಸಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ನನಗೆ ಟಿಕೆಟ್ ಕೈತಪ್ಪಿದಾಗ ಕರೆ ಮಾಡಿದ್ದ ಎಸ್ಎಂ ಕೃಷ್ಣ ಸಾಹೇಬರು ಕರೆ ಮಾಡಿ, "ನಿನಗೆ ಅನ್ಯಾಯ ಆಯಿತು. ಒಳ್ಳೆಯ ಕೆಲಸಗಳನ್ನ ಮಾಡ್ತಿದ್ದೆ. ಆದರೆ ಟಿಕೆಟ್ ಕೈತಪ್ಪಿದ್ದರಿಂದ ಅಧೀರನಾಗಬೇಡ ಮುಂದಿನ ದಿನಗಳು ಒಳ್ಳೆಯದಾಗಿರುತ್ತೆ ಎಂದು ಹೇಳಿದ್ದರು. ಅವರ ಮನೆಯವರೂ ಸಹ ನನಗೆ ಸಮಾಧಾನ ಹೇಳಿದ್ದರು" ಎಂದು ಹಿರಿಯ ನಾಯಕನನ್ನು ಪ್ರತಾಪ್ ಸಿಂಹ ನೆನಪಿಸಿಕೊಂಡಿದ್ದಾರೆ.
"ಎಸ್ಎಂ ಕೃಷ್ಣ ಕರ್ನಾಟಕದ ಲೆಜೆಂಡರಿ ಚೀಫ್ ಮಿನಿಸ್ಟರ್, ನಾನು ರಾಜಕಾರಣಕ್ಕೆ ಹೊಸಬ, ನನಗೆ ಟಿಕೆಟ್ ಕೈತಪ್ಪಿದಾಗ ಬೇರೆ ಯಾವ ರಾಜಕಾರಣಿಯೂ ಕರೆ ಮಾಡಿ ಮಾತನಾಡಲಿಲ್ಲ. ಆದರೆ ಎಸ್ಎಂ ಕೃಷ್ಣ ಅವರು ಮಾತನಾಡಿದ್ದರು. ಅಂತಹ ದೊಡ್ಡ ವ್ಯಕ್ತಿ ನನಗೆ ಸಮಾಧಾನ ಮಾಡಿದ್ದರು ನನ್ನ ಮೇಲೆ ಅವರಿಗಿದ್ದ ಪ್ರೀತಿ, ಕಾಳಜಿಗೆ ನಾನು ಋಣಿಯಾಗಿರುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಅವರ ಅಧಿಕಾರ ಅವಧಿಯಲ್ಲಿ ರಾಜ್ ಕುಮಾರ್ ಅಪಹರಣ, ಕಾವೇರಿ ಗಲಾಟೆ, ನಾಗಪ್ಪ ಹತ್ಯೆ, ವಿಠಲನಹಳ್ಳಿ ಗೋಲಿಬಾರ್, ರೈತರ ಆತ್ಮಹತ್ಯೆಯಂತಹ ಸಾಲು ಸಾಲು ಸವಾಲುಗಳನ್ನು ಎದುರಿಸಿದ್ದರು. ಅವರು ಪ್ರತಿಕ್ರಿಯೆ ಕೊಡುವಾಗ ಒಂದೇ ಒಂದು ಬಾರಿಯೂ ಸಭ್ಯತೆಯ ಗೆರೆ ದಾಟಲಿಲ್ಲ. ಯಾರೊಬ್ಬರನ್ನೂ ಅವರು ಏಕವಚನದಿಂದ ಸಂಬೋಧಿಸಿಲ್ಲ ಎಂದು ಪ್ರತಾಪ್ ಸಿಂಹ ಎಸ್ಎಂ ಕೆ ಸಜ್ಜನಿಕೆಯನ್ನು ಸ್ಮರಿಸಿದ್ದಾರೆ.
"ಕರ್ನಾಟಕದ ಪಾಲಿಗೆ ಬೆಂಗಳೂರು ಕೇಳಿದ್ದೆಲ್ಲಾ ಕೊಡುವ ಕಾಮಧೇನುವಾಗಿದ್ದರೆ ಅದಕ್ಕೆ ಎಸ್ಎಂ ಕೆ ಅವರಿಗಿದ್ದ ದೂರದೃಷ್ಟಿ ಕಾರಣ, ಆದಾಯಕ್ಕೆ ತಕ್ಕಂತೆ ಖರ್ಚು ಮಾಡಬೇಕೆಂಬ ಉದ್ದೇಶದಿಂದ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಜಾರಿಗೆ ತಂದರು, ಅದರ ಪರಿಣಾಮವಾಗಿ ಇಂದು ಕರ್ನಾಟಕ ಸರ್ಪ್ಲಸ್ ಬಜೆಟ್ ಮಂಡಿಸಲು ಸಾಧ್ಯವಾಗಿದೆ. ಭೂ ದಾಖಲೆಗಳ ಡಿಜಿಟಲೀಕರಣಕ್ಕೂ ಎಸ್ಎಂ ಕೃಷ್ಣ ಕಾರಣೀಭೂತರಾಗಿದ್ದರು. 2 ನೇ ಶ್ರೇಣಿ 3ನೇ ಶ್ರೇಣಿ ನಗರಗಳಲ್ಲಿ ಸಾಫ್ಟ್ ವೇರ್, ಕೈಗಾರಿಕೆಗಳು ಬರುವುದಕ್ಕೆ ಎಸ್ಎಂ ಕೃಷ್ಣ ಕಾರಣಕರ್ತರಾದರು. ಇಂದು ನಾವು ಮೈಸೂರು-ಬೆಂಗಳೂರು ಹೈವೇಯನ್ನು ವಿಸ್ತರಿಸಿರಬಹುದು ಆದರೆ ಈ ನಗರಗಳ ನಡುವೆ 4 ಲೇನ್ ಸ್ಟೇಟ್ ಹೈವೇ ನಿರ್ಮಿಸಿದ್ದು ಎಸ್ಎಂ ಕೃಷ್ಣ" ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
Advertisement