ನೆಲಮಂಗಲ ಅಪಘಾತದಲ್ಲಿ ಮೃತಪಟ್ಟ ಚಂದ್ರಮ್ ಕುಟುಂಬಸ್ಥರ ಆಕ್ರಂದನ; ಹುಟ್ಟೂರು ಮಹಾರಾಷ್ಟ್ರದ ಮೊರಬಗಿಯಲ್ಲಿ ಅಂತ್ಯಕ್ರಿಯೆ
ಬೆಂಗಳೂರು: ನೆಲಮಂಗಲ ಬಳಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನ ಮೇಲೆ ಭಾರೀ ಗಾತ್ರದ ಕಂಟೇನರ್ ಕೆಳಗೆ ಬಿದ್ದು ಐಟಿ ಕಂಪೆನಿ ಮಾಲೀಕ ಚಂದ್ರಮ್ ಯೇಗಪ್ಪಗೋಳ ಹಾಗೂ ಅವರ ಕುಟುಂಬಸ್ಥರ ಮೃತದೇಹ ಇಂದು ಭಾನುವಾರ ಹುಟ್ಟೂರು ಮಹಾರಾಷ್ಟ್ರದ ಮೊರಬಗಿ ಗ್ರಾಮಕ್ಕೆ ತಲುಪಿದೆ. ಅಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಮೃತಪಟ್ಟವರ ಅಂತಿಮ ದರ್ಶನ ಪಡೆಯಲು ಸೇರಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48ರ ತಿಪ್ಪಗೊಂಡನ ಹಳ್ಳಿ-ತಾಳೇಕೆರೆ ಗೇಟ್ ಮಧ್ಯೆ ನಿನ್ನೆ ಅಪಘಾತದಲ್ಲಿ ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದ ಚಂದ್ರಮ್ ಯೇಗಪ್ಪಗೋಳ(48), ಗೌರಬಾಯಿ(42), ಜಾನ್(16) ದೀಕ್ಷಾ(12) ವಿಜಯಲಕ್ಷ್ಮೀ(36) ಮೃತಪಟ್ಟಿದ್ದರು. ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯಲ್ಲಿ ವಾಸವಾಗಿದ್ದ ಚಂದ್ರಮ್ ಐಎಎಸ್ಟಿ ಸಾಫ್ಟ್ವೇರ್ ಸಲ್ಯೂಷನ್ ಕಂಪೆನಿ ನಡೆಸುತ್ತಿದ್ದರು.
ಅಪಘಾತ ಹೇಗೆ ಸಂಭವಿಸಿತು?
ನಿನ್ನೆ ಆಗಿರುವ ಅಪಘಾತ ಬಗ್ಗೆ ಕ್ಯಾಂಟರ್ ಚಾಲಕ ಹೀಗೆ ಹೇಳುತ್ತಾರೆ: ''ದಾಬಸ್ಪೇಟೆಯಿಂದ ಬೆಂಗಳೂರಿನ ಬೈಪಾಸ್ ಕಡೆಗೆ ಬರುತ್ತಿದ್ದೆ. ಈ ವೇಳೆ ನನ್ನ ಎದುರುಗಡೆ ನಾನು ಗಾಡಿ ನೋಡಿ ನಿಧಾನವಾಗಿ ಬ್ರೇಕ್ ಹಾಕುತ್ತಲೇ ಹೋದೆ. ನನ್ನ ಎದುರಿಗೆ ಇದ್ದ ಕಾರಿನವರು ದಿಢೀರ್ ಬ್ರೇಕ್ ಹಾಕಿದರು. ನನ್ನ ಮುಂದಿದ್ದ ಕಾರಿಗೆ ಗುದ್ದಬಾರದು. ಅವರನ್ನು ಸೇಫ್ ಮಾಡಲು ಹೋಗಿ, ಸ್ಟೇರಿಂಗ್ ಬಲಗಡೆಗೆ ಎಳೆದುಕೊಂಡೆ. ಈ ವೇಳೆ ಇನ್ನೊಂದು ಕಡೆಯಿಂದಲೂ ದೊಡ್ಡ ಕ್ಯಾಂಟರ್ ಬರುವುದನ್ನು ನೋಡಿದೆ. ಟ್ರಕ್ಗೆ ಗುದ್ದಬಾರದು ಎಂದು ಮತ್ತೊಮ್ಮೆ ಸ್ಟೇರಿಂಗ್ ಲೆಫ್ಟ್ ಗೆ ಎಳೆದುಕೊಂಡೆ. ಈ ವೇಳೆ ಲಾರಿ ಡಿವೈಡರ್ ದಾಟಿ ಮುಂದಿನ ರಸ್ತೆಗೆ ಪಲ್ಟಿ ಹೊಡೆಯಿತು. ಕಾರಿನ ಮೇಲೆ ನನ್ನ ಲಾರಿ ಪಲ್ಟಿಯಾಗಿತ್ತು. ನಾನು ಕಾರನ್ನು ಬಚಾವ್ ಮಾಡಲು ಹೋದೆ. ಮುಂದೆ ಡಿವೈಡರ್ ಮೇಲೆ ಹತ್ತಿ ಲಾರಿ ಪಲ್ಟಿ ಆಯ್ತು, ಮುಂದೆ ಕಾರ್ ಮತ್ತೆ ಕಂಟೇನರ್ ಇತ್ತು. ಕಂಟೇನರ್ ಟಚ್ ಆಗಿ ನನ್ನ ಲಾರಿ ಪಲ್ಟಿ ಹೊಡೆದಿದೆ. 6 ಮಂದಿ ಮೃತಪಟ್ಟಿರುವುದು ನನಗೆ ಗೊತ್ತಿಲ್ಲ'' ಎಂದರು.
ಬೇಸರ ವ್ಯಕ್ತಪಡಿಸಿದ ವೋಲ್ವೋ ಕಂಪನಿ
ಬೆಂಗಳೂರು ಮಾರ್ಟಿಯಲ್ ವೋಲ್ವೋ ಕಾರ್ಸ್ ಶೋ ರೂಮ್ನಲ್ಲಿ ಅವರು ವೋಲ್ವೋ ಎಕ್ಸ್ಇ 90 ಕಾರು ಖರೀದಿ ಮಾಡಿದ್ದರು. ಇದರ ವಿಡಿಯೋವನ್ನು ಮಾರ್ಟಿಯಲ್ ವೋಲ್ವೋ ಕಾರ್ಸ್ ನವೆಂಬರ್ 5ರಂದು ತನ್ನ ಇನ್ಸಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋಗೆ ಸಾಕಷ್ಟು ಮಂದಿ ಆರ್ಐಪಿ ಎಂದು ಕಾಮೆಂಟ್ ಮಾಡಿದ್ದಾರೆ. ಇಷ್ಟು ಸಂಭ್ರಮದಲ್ಲಿ ಕಾರು ಖರೀದಿಸಿದ್ದ ನಿಮ್ಮ ಕುಟುಂಬದ ಸಾವು ಈ ರೀತಿ ಆಗಿದ್ದಕ್ಕೆ ಬೇಸರವಿದೆ ಎಂದು ಬರೆದಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ
ಘಟನಾ ಸ್ಥಳಕ್ಕೆ ಭೇಟಿ ಬಳಿಕ ಕೇಂದ್ರ ವಲಯ ಐಜಿಪಿ ಲಾಬೂ ರಾಮ್ ಮಾತನಾಡಿ, ವೋಲ್ವೋ ಕಾರಿನಲ್ಲಿ ತೆರಳುತ್ತಿದ್ದ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಪಘಾತದ ಸಂಬಂಧ ಇಡೀ ಪ್ರಕರಣದ ತನಿಖೆ ನಡೆಸಲು ಪೊಲೀಸ್ ಇಲಾಖೆ ವಿಶೇಷ ತನಿಖಾಧಿಕಾರಿಯಾಗಿ ನೆಲಮಂಗಲ ಉಪವಿಭಾಗದ ಉಪ ಅಧೀಕ್ಷಕ ಜಗದೀಶ್ ಅವರನ್ನು ನೇಮಕ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ