ಉಡುಪಿ: ಖ್ಯಾತ ಹುಲಿ ವೇಷದಾರಿ ಅಶೋಕ್ ರಾಜ್ ಅವರು ಮೃತಪಟ್ಟಿದ್ದಾರೆ. ಮಹಾನವಮಿ ಸಂದರ್ಭದ ಸಾಂಪ್ರದಾಯಿಕ ಹುಲಿ ವೇಷಕ್ಕೆ ಹೊಸ ಆಯಾಮ ನೀಡಿದ್ದ ಖ್ಯಾತ ಕಲಾವಿದರಾಗಿದ್ದ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮೃತರಾಗಿದ್ದಾರೆ, ಅವರಿಗೆ 56 ವರ್ಷ ವಯಸ್ಸಾಗಿತ್ತು.
ಉಡುಪಿಯ ಕಾಡುಬೆಟ್ಟು ನಿವಾಸಿಯಾದ ಅಶೋಕ್ ರಾಜ್, ಉಡುಪಿ ಅಷ್ಟಮಿ ಹಾಗೂ ವಿಟ್ಲಪಿಂಡಿಯ ವೇಳೆ ತಮ್ಮ ತಂಡದ ಜೊತೆಗೆ ಹುಲಿ ವೇಷ ಧರಿಸಿ ಹವಾ ಸೃಷ್ಟಿಸುತ್ತಿದ್ದರು. ಕಳೆದ ಮೂರು ದಶಕಗಳಲ್ಲಿ ಹುಲಿ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ಅವರು ಹುಲಿ ವೇಷವನ್ನು ರಾಜ್ಯ ಮತ್ತು ದೇಶಾದ್ಯಂತ ಪ್ರಚಾರಪಡಿಸಿದ್ದರು. ಅವರಿಂದ ಪ್ರೇರಣೆ ಪಡೆದ ನೂರಾರು ಮಂದಿ ಹುಲಿ ಕುಣಿತವನ್ನು ಸ್ಫೂರ್ತಿಯಾಗಿ ಮಾಡಿಕೊಂಡಿದ್ದರು.
ಅಶೋಕ್ ರಾಜ್ ಕಾಡುಬೆಟ್ಟು ಅವರ ಇಡೀ ಕುಟುಂಬವೇ ಹುಲಿವೇಷಕ್ಕೆ ಮುಡಿಪಾಗಿತ್ತು. ನಟಿ ಸುಷ್ಮಾ ರಾಜ್, ಅಶೋಕ್ ರಾಜ್ ಕಾಡುಬೆಟ್ಟು ಅವರ ಮಗಳು. ಅಶೋಕ್ ಅವರು ಕಳೆದ ಬಾರಿ ನವರಾತ್ರಿಯ ಸಂದರ್ಭ ಬೆಂಗಳೂರಿನಲ್ಲಿ ಹುಲಿವೇಷ ಧರಿಸಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಅಸ್ವಸ್ಥರಾಗಿ, ಬಳಿಕ ಆಸ್ಪತ್ರೆ ಸೇರಿದ್ದರು.
Advertisement