ಜನಸ್ಪಂದನ: ವೈದ್ಯಕೀಯ ಚಿಕಿತ್ಸೆ, ಸಣ್ಣಪುಟ್ಟ ವ್ಯಾಪಾರ ಮಾಡಲು ಹಣಕ್ಕೆ ಅನೇಕರಿಂದ ಮನವಿ
ಬೆಂಗಳೂರು: ವಿಧಾನಸೌಧದಲ್ಲಿ ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನ ತಮ್ಮ ಅಹವಾಲುಗಳೊಂದಿಗೆ ಆಗಮಿಸಿದ್ದರು. ವಿವಿಧ ಜಿಲ್ಲೆಗಳಿಂದ ನಾಗರಿಕರು ಸಮಯಕ್ಕಿಂತ ಮುಂಚೆಯೇ ಸ್ಥಳಕ್ಕೆ ಬರಲು ಪ್ರಾರಂಭಿಸಿದರು ಮತ್ತು ತಮ್ಮ ಅರ್ಜಿಗಳನ್ನು ಸಲ್ಲಿಸಲು ಆಯಾ ಇಲಾಖೆಯ ಕೌಂಟರ್ ಗಳಿಗಾಗಿ ಪರದಾಡಿದರು.
ಡಯಾಲಿಸಿಸ್, ಶಸ್ತ್ರಚಿಕಿತ್ಸಾ ವಿಧಾನಗಳು ಮತ್ತು ಇತರ ವೈದ್ಯಕೀಯ ವೆಚ್ಚಗಳಿಗೆ ಪರಿಹಾರ ಧನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಅನೇಕರು ಬಂದಿದ್ದರು. ಇನ್ನೂ ಕೆಲವರು ತಮ್ಮ ಜೀವನೋಪಾಯಕ್ಕಾಗಿ ಉದ್ಯಮ ಸ್ಥಾಪಿಸಲು ಅನುದಾನ ನೀಡುವಂತೆ ಮನವಿ ಮಾಡಿದ್ದರು.
ಕಾರ್ಯಕ್ರಮಕ್ಕಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನಸೌಧಕ್ಕೆ ಪ್ರಯಾಣಿಸಲು ಉಚಿತ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಿತ್ತು.
ಈ ಮಧ್ಯೆ, ಕಂದಾಯ ಇಲಾಖೆಯಲ್ಲಿ ಜನಜಂಗುಳಿ ಹೆಚ್ಚಾದ ಕಾರಣ ಅಧಿಕಾರಿಗಳು ದಟ್ಟಣೆ ನಿಭಾಯಿಸಲು ಮತ್ತೊಂದು ಕೌಂಟರ್ ತೆರೆದರು. ಕಾರ್ಯಕ್ರಮದ ನಿಮಿತ್ತ ವಿಧಾನಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಂಚಾರಿ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲೇ ನಿಂತು ವಾಹನ ಸಂಚಾರವನ್ನು ನಿರ್ವಹಿಸುತ್ತಿರುವುದು ಕಂಡು ಬಂತು.
ಅಪಘಾತಕ್ಕೀಡಾದ ಲೋಕೇಶ್ ಪುಟ್ಟಣ್ಣಯ್ಯ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದರು ಮತ್ತು ಸ್ಥಳದಲ್ಲೇ ಪರಿಹಾರ ಮಂಜೂರು ಮಾಡಿದ ಪತ್ರ ನೀಡಿದರು. ಕೋಲಾರ ಜಿಲ್ಲೆಯ 8 ವರ್ಷದ ಎನ್ ಕೃಷ್ಣಾ ಅವರಿಗೂ 1 ಲಕ್ಷ ರೂ. ಪರಿಹಾರ ನೀಡಿದರು.
ತ್ರಿಚಕ್ರ ವಾಹನದಲ್ಲಿ ಕುಳಿತಿದ್ದ ವಿಕಲ ಚೇತನ ಅಬೂಬಕರ್ ವಿಜಯಪುರದಿಂದ ಬಂದಿದ್ದರು. “ನನಗೆ 35 ವರ್ಷ. ನಾನು ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಲು ತವರೂರಿನಲ್ಲಿ ಪ್ರಾವಿಷನ್ ಸ್ಟೋರ್ ಮಾಡಲು ಬಯಸಿದ್ದೇನೆ. ಜೀವನೋಪಾಯಕ್ಕಾಗಿ ಅಂಗಡಿ ತೆರೆಯಲು ಹಣ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.
ಇನ್ನು ಹಲವರು ತಮ್ಮ ಅಹವಾಲು ಮತ್ತು ಮನವಿಗಳಿಗೆ ಪರಿಹಾರ ಸಿಗುವ ಭರವಸೆಯೊಂದಿಗೆ ವಿಧಾನಸೌಧದಿಂದ ತೆರಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ