ಕೇಂದ್ರ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ: ಸಿದ್ದರಾಮಯ್ಯ ಲೇವಡಿ
ಬೆಂಗಳೂರು: ಬಡವರು, ರೈತರ ಬಗ್ಗೆ ಮಾತನಾಡುವ ನೈತಿಕತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗಿಲ್ಲ. ರಾಜ್ಯಕ್ಕೆ ಅವರು ಬರಿಗೈಯಲ್ಲಿ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆ ಹಾಗೂ ಮುಖಂಡರ ಸಭೆ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐದು ತಿಂಗಳಾದರೂ ಬರಗಾಲದ ಬಗ್ಗೆ ಇಲ್ಲಿಯವರೆಗೂ ಒಂದು ಸಭೆಯನ್ನೂ ಅಮಿತ್ ಶಾ ಕರೆದಿಲ್ಲ. ಬರ ಪರಿಹಾರ ಸಮಿತಿಯ ಅಧ್ಯಕ್ಷರು ಅವರೇ ಆಗಿದ್ದಾರೆ. ದೇಶದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದರು.
ರೈತರು ಬರಗಾಲದಲ್ಲಿ ಕಷ್ಟಪಡುತ್ತಿದ್ದಾರೆ. ಬರಗಾಲ ಬಂದಾಗ ಎಂಜಿನರೇಗಾ ಯೋಜನೆಯಡಿ 150 ಮಾನವ ದಿನಗಳನ್ನು ಹೆಚ್ಚಿಸುವುದು ಕಡ್ಡಾಯವಾದರೂ ಇಂದಿನವರೆಗೆ ಹೆಚ್ಚಿಸಿಲ್ಲ. ಈ ಸಂಬಂಧ ಬರೆದ ಎರಡ್ಮೂರು ಪತ್ರಕ್ಕೂ ಉತ್ತರ ನೀಡಿಲ್ಲ ಎಂದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಹಂಚಿಕೆ ಬಗ್ಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ನೀಡಿದ ಹೇಳಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಪ್ರಸ್ತುತ ದೇವೇಗೌಡರು ಬಿಜೆಪಿ ಜತೆ ಸೇರಿದ್ದಾರೆ. ಇದೇ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು. ಅದರ ಬಗ್ಗೆ ಈಗ ಏನು ಹೇಳುತ್ತಾರೆ? ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿಯವರು ಮಾಡಿದ ಅನ್ಯಾಯವನ್ನೆಲ್ಲ ಸರಿ ಎಂದು ದೇವೇಗೌಡರು ಹೇಳಬಾರದು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ