ಮಣ್ಣಿನ ಮಕ್ಕಳು ಎನ್ನುವವರು ಎತ್ತಿನಹೊಳೆ ಯೋಜನೆ ವಿರೋಧಿಸಿದ್ದರು: ಸಿಎಂ ಸಿದ್ದರಾಮಯ್ಯ

ಮಣ್ಣಿನ ಮಕ್ಕಳು ಎನ್ನುವವರು ಎತ್ತಿನಹೊಳೆ ಯೋಜನೆ ವಿರೋಧಿಸಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳುವ ಮೂಲಕ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಅರಸೀಕೆರೆ: ಮಣ್ಣಿನ ಮಕ್ಕಳು ಎನ್ನುವವರು ಎತ್ತಿನಹೊಳೆ ಯೋಜನೆ ವಿರೋಧಿಸಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳುವ ಮೂಲಕ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅರಸೀಕೆರೆ ತಾಲ್ಲೂಕಿನ ಬಾಣಾವರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ, ಮಾತನಾಡಿದ ಮುಖ್ಯಮಂತ್ರಿ, ಎತ್ತಿನಹೊಳೆ ಯೋಜನೆ ಪರವಾಗಿ ಶಿವಲಿಂಗೇಗೌಡರು ನಿರಂತರವಾಗಿ ಹೋರಾಡುತ್ತಿದ್ದಾರೆ. ನಾವು ಮಾತ್ರ ಮಣ್ಣಿನ ಮಕ್ಕಳು ಎನ್ನುವವರು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದ್ದರು. ಯಾರೇ ವಿರೋಧ ಮಾಡಿದರೂ ಎರಡು ವರ್ಷಗಳಲ್ಲಿ ಎತ್ತಿನ ಹೊಳೆ ಯೋಜನೆಯಿಂದ ಕ್ಷೇತ್ರಕ್ಕೆ ನೀರು ಕೊಡುವುದು ಗ್ಯಾರಂಟಿ ಎಂದರು.

ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡ್ತೀವಿ, ಇದಕ್ಕಾಗಿ 5,300 ಕೋಟಿ ರೂಪಾಯಿ ಅನುದಾನ ಕೊಡ್ತೀವಿ ಎಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ನಲ್ಲಿ ಮತ್ತು ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್‌ನಲ್ಲಿ ಘೋಷಿಸಿದರು. ಆದರೆ ಇವತ್ತಿನವರೆಗೂ ಒಂದೇ ಒಂದು ರೂಪಾಯಿಯನ್ನೂ ಕೊಡದೆ ರಾಜ್ಯಕ್ಕೆ ವಂಚಿಸಿದರು. ಇವರು ನಿಮ್ಮ ಪರವಾಗಿ ಇರುವವರಾ? ರಾಜ್ಯದ ಪರವಾಗಿ ನಿಲ್ಲುವವರಾ ಎನ್ನುವುದನ್ನು ಜನರೇ ತೀರ್ಮಾನಿಸಬೇಕು ಎಂದು ಹೇಳಿದರು.

ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದ ದೇವೇಗೌಡರು ಈಗ ಬಿಜೆಪಿ ಜೊತೆಗೆ ಕೂಡಿಕೆ ಮಾಡಿಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ವಿಧಾನ ಪರಿಷತ್ ಗೆ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ನಮ್ಮ ಜನ ಬಿಜೆಪಿ-ಜೆಡಿಎಸ್ ದೋಸ್ತಿಯನ್ನು ಸೋಲಿಸಿ ನಮ್ಮ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಭರ್ಜರಿಯಾಗಿ ಗೆಲ್ಲಿಸಿದರು. ಬರಲಿರುವ ಲೋಕಸಭಾ ಚುನಾವಣೆಯಲ್ಲೂ ಅವರ ದೋಸ್ತಿಗೆ ಇದೇ ಗತಿ ಆಗಲಿದೆ ಎಂದು ಭವಿಷ್ಯ ನುಡಿದ ಮುಖ್ಯಮಂತ್ರಿ,

ರಾಜ್ಯಕ್ಕೆ ಕೇಂದ್ರ ಸರ್ಕಾರ ವಂಚಿಸುತ್ತಿದೆ, ರಾಜ್ಯಕ್ಕೆ ಆದ ಅನ್ಯಾಯವನ್ನು ಸಮರ್ಥಿಸಿ ಕೇಂದ್ರದ ಪರವಾಗಿ ಮಾತನಾಡುತ್ತಿರುವ ಬಿಜೆಪಿಯವರು ರಾಜ್ಯದ ಜನರ ಪರವಾಗಿ ನಿಲ್ಲುತ್ತಾರಾ ಎಂದು ನೀವೇ ತೀರ್ಮಾನಿಸಬೇಕು ಎಂದರು.

ಸಿಎಂ ಸಿದ್ದರಾಮಯ್ಯ
ದೇವಸ್ಥಾನಗಳ ಹಣವನ್ನು ಬಳಕೆ ಬಗ್ಗೆ ಬಿಜೆಪಿ ನಾಯಕರ ಆರೋಪ ಕಪೋಲಕಲ್ಪಿತ- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ನಾವು ಅಧಿಕಾರಕ್ಕೆ ಬಂದ ದಿನದಿಂದಲೇ ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವ ಕಾರ್ಯ ಶುರು ಮಾಡಿದ್ದೇವೆ. ಎಂಟು ತಿಂಗಳುಗಳಲ್ಲೇ ಐತಿಹಾಸಿಕವಾದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಪ್ರತೀ ವರ್ಷ 60,000 ಕೋಟಿ ರೂಪಾಯಿಗಳನ್ನು ತಿಂಗಳ ಕಂತುಗಳಲ್ಲಿ ಜನರ ಜೇಬಿಗೆ ಹಾಕುತ್ತಿದ್ದೇವೆ. ಒಂದು ಕಡೆ ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಬಿಜೆಪಿಯವರು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಮತ್ತೊಂದು ಕಡೆ ನರೇಂದ್ರ ಮೋದಿ

ಅವರು ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರು ಬದಲಾಯಿಸಿದ್ದಾರೆ ಎಂದು ಟೀಕಿಸಿದರು.

ಶಾಸಕ ಶಿವಲಿಂಗೇಗೌಡರು ತಮ್ಮ ಕೆಲಸ ಕಾರ್ಯಗಳಿಂದ ನಿರಂತರವಾಗಿ ಗೆಲ್ಲುತ್ತಾರೆ. ನಾನು ಹಲವು ವರ್ಷಗಳಿಂದ ಶಾಸಕ ಶಿವಲಿಂಗೇಗೌಡರ ಕೆಲಸಗಳನ್ನು ನೋಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಜತೆಗೆ ರಾಜ್ಯದ ಅಭಿವೃದ್ಧಿ ಬಗ್ಗೆ ವಿಧಾನಸಭೆಯಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತಾರೆ. ಹೀಗಾಗಿ ಶಿವಲಿಂಗೇಗೌಡರು ಶಾಶ್ವತವಾಗಿ ವಿಧಾನಸಭೆಗೆ ಆರಿಸಿ ಬರಬೇಕು. ಬಾಣಾವರದ ಎರಡೂ ಪಂಚಾಯ್ತಿಗಳನ್ನು ಒಟ್ಟಾಗಿಸಿ ಪಟ್ಟಣ ಪಂಚಾಯ್ತಿ ಮಾಡಿ ಕೊಡುತ್ತೇವೆ. ಇಡೀ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಒದಗಿಸುತ್ತೇವೆ. ನಮ್ಮ ಸರ್ಕಾರ ಅರಸೀಕೆರೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com