ಹಾವೇರಿ ನೈತಿಕ ಪೊಲೀಸ್‌ಗಿರಿ ಪ್ರಕರಣ: ಹಣದ ಆಮಿಷವೊಡ್ಡಿ ಮುಚ್ಚಿ ಹಾಕಲು ಯತ್ನ- ಮಾಜಿ ಸಿಎಂ ಬೊಮ್ಮಾಯಿ

ಹಾವೇರಿಯ ನೈತಿಕ ಪೊಲೀಸ್‌ಗಿರಿ ಪ್ರಕರಣವನ್ನು ಸಂತ್ರಸ್ತರಿಗೆ ಹಣ ನೀಡುವ ಮೂಲಕ  ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಆರೋಪಿಸಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಹಾವೇರಿಯ ನೈತಿಕ ಪೊಲೀಸ್‌ಗಿರಿ ಪ್ರಕರಣವನ್ನು ಸಂತ್ರಸ್ತರಿಗೆ ಹಣ ನೀಡುವ ಮೂಲಕ  ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ ಪ್ರಕರಣವನ್ನು ಅಲ್ಲಿನ ಪೊಲೀಸರು ಸಂತ್ರಸ್ತರಿಗೆ ದುಡ್ಡು ಕೊಟ್ಟು ಆಮಿಷವೊಡ್ಡಿ ಮುಚ್ಚಿ ಹಾಕಲು ಯತ್ನಿಸಿದ್ದರು. ತನಿಖೆಗೆ ಎಸ್.ಐ.ಟಿ ರಚನೆ ಮಾಡಿ. ಸಿಎಂ ಸಿದ್ದರಾಮಯ್ಯ ಸೋಮವಾರ ಹಾವೇರಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿಯಾದರೂ ಎಸ್ಐಟಿ ತನಿಖೆಗೆ ಘೋಷಿಸುತ್ತಾರೆ ಅಂತ ನಿರೀಕ್ಷೆ ಮಾಡುತ್ತೇನೆ ಎಂದರು.

ಬಿಜೆಪಿ ಮಹಿಳಾ ನಿಯೋಗ ಹಾವೇರಿಗೆ ಭೇಟಿ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ದೊರೆತ ನಂತರ ತನಿಖೆಯ ನೆಪದಲ್ಲಿ ಸಂತ್ರಸ್ತೆಯನ್ನು ಶಿರಸಿಗೆ ಕರೆದೊಯ್ಯಲಾಗಿದೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಪಕ್ಷವು ಈ ರೀತಿಯ ರಾಜಕೀಯ ಮಾಡುತ್ತಿದೆ ಮತ್ತು ಅವರಿಂದ ಇನ್ನೇನು ನಿರೀಕ್ಷಿಸಬಹುದು?" ಎಂದು ಪ್ರಶ್ನಿಸಿದರು. 

ಏನಿದು ಪ್ರಕರಣ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಲ್ವರ್ ಕ್ರಾಸ್ ಬಳಿಯ ಲಾಡ್ಜ್‌ಗೆ ನುಗ್ಗಿದ್ದ ನಾಲ್ವರು ಅಲ್ಲಿ ತಂಗಿದ್ದ ಅಂತರ್ ಧರ್ಮಿಯ ದಂಪತಿಯ ಮೇಲೆ ಥಳಿಸಿದ್ದು, ಮಹಿಳೆ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿರುವುದಾಗಿ ದೂರು ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.  ಸಂತ್ರಸ್ತೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಸಿಆರ್‌ಪಿಸಿಯ 164 ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ. ಸಂತ್ರಸ್ತೆ ಹೇಳಿಕೆಯಲ್ಲಿ ಏಳು ಜನರ ಮೇಲೆ ಆರೋಪ ಮಾಡಿದ್ದು, ಅವರಲ್ಲಿ ಮೂವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಮಧ್ಯೆ ರಾಮಮಂದಿರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೂ ಟರ್ನ್ ಮಾಡಿದ್ದಾರೆ ಎಂದು ಆರೋಪಿಸಿದ ಬೊಮ್ಮಾಯಿ, ತಡವಾಗಿಯಾದರೂ ಸಿಎಂಗೆ ಬುದ್ಧಿ ಬಂದಿದೆ ಎಂದರು. ‘ಅವರ ಹೆಸರಿನಲ್ಲಿ ರಾಮನ ಹೆಸರಿದೆ. ಆದರೆ ಸಿದ್ದರಾಮಯ್ಯ ಅಧಿಕಾರ ರಾಜಕಾರಣಕ್ಕಾಗಿ ರಾಮನನ್ನು ಕಡೆಗಣಿಸಿದ್ದಾರೆ ಎಂದು ಟೀಕಿಸಿದರು. ಜನವರಿ 22 ರ ನಂತರ ಅಯೋಧ್ಯೆಗೆ ಹೋಗುವುದಾಗಿ ಸಿಎಂ ಹೇಳಿದ್ದರು ಆದರೆ ನಂತರ ನಿರಾಕರಿಸಿದ್ದರು.ಅವರ ಆತ್ಮಸಾಕ್ಷಿ ಹೋಗಬೇಕಂತಿದೆ. ಆದರೆ ಹೈಕಮಾಂಡ್ ಬೇಡವೆನ್ನುತ್ತಿದೆ. ಸಿದ್ದರಾಮಯ್ಯ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com