ಇಂದು ಕರ್ನಾಟಕಕ್ಕೆ ಪ್ರಧಾನಿ ಭೇಟಿ: ಕಲಬುರಗಿ ನಂತರ ಮಧ್ಯಾಹ್ನ ಬೆಂಗಳೂರಿಗೆ ಆಗಮನ, ಸಂಚಾರ ಮಾರ್ಗ ಬದಲಾವಣೆ ವಿವರ ಹೀಗಿದೆ...

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಶುಕ್ರವಾರ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ದೆಹಲಿಯಿಂದ ಹೊರಟು ಬೆಳಗ್ಗೆ 9:35ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಕಲಬುರಗಿಯಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಲಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಶುಕ್ರವಾರ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ದೆಹಲಿಯಿಂದ ಹೊರಟು ಬೆಳಗ್ಗೆ 9:35ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಕಲಬುರಗಿಯಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಲಿದ್ದಾರೆ. ಅಲ್ಲಿ ಎರಡು ಗಂಟೆ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಧ್ಯಾಹ್ನ 1 ಗಂಟೆಗೆ ಮತ್ತೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 1:05 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮಧ್ಯಾಹ್ನ 2.10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. 2.15ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ವಿಮಾನ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಇಂದು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ನಿರ್ಬಂಧಿಸಲಾಗಿದೆ.

ಮೋದಿ ಸ್ವಾಗತಕ್ಕೆ ಸಿಎಂ ಸಿದ್ದರಾಮಯ್ಯ: ಇಂದು ಮಧ್ಯಾಹ್ನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಲಿದ್ದಾರೆ. ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೋದಿ ಜೊತೆ ಸಿದ್ದರಾಮಯ್ಯ ಅವರು ಭಾಗಿಯಾಗಲಿದ್ದಾರೆ.

ಬೋಯಿಂಗ್ ಸೌಲಭ್ಯ ಉದ್ಘಾಟನೆ: ಪ್ರಧಾನಿ ಮೋದಿಯವರು ಅತಿದೊಡ್ಡ ಬೋಯಿಂಗ್ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಹೊಸ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ (BIETC) ಕ್ಯಾಂಪಸ್ ನ್ನು ಬೆಂಗಳೂರು ವಿಮಾನ ನಿಲ್ದಾಣದ ಸಮೀಪವಿರುವ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ನಿರ್ಮಿಸಲಾಗಿದೆ.

1,600 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ನಿರ್ಮಿಸಲಾದ 43 ಎಕರೆ ಕ್ಯಾಂಪಸ್ ಅಮೆರಿಕ ದೇಶದ ಹೊರಗೆ ಬೋಯಿಂಗ್‌ನ ಅತಿದೊಡ್ಡ ಹೂಡಿಕೆಯಾಗಿದೆ. ಪಿಎಂ ಮೋದಿ ಅವರು ಬೋಯಿಂಗ್ ಸುಕನ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಇದು ದೇಶದ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರಕ್ಕೆ ಭಾರತದಾದ್ಯಂತ ಹೆಚ್ಚಿನ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮವು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ನಿರ್ಣಾಯಕ ಕೌಶಲ್ಯಗಳನ್ನು ಕಲಿಯಲು ಮತ್ತು ವಾಯುಯಾನ ವಲಯದಲ್ಲಿ ಉದ್ಯೋಗಗಳಿಗೆ ತರಬೇತಿ ನೀಡಲು ಅವಕಾಶಗಳನ್ನು ಒದಗಿಸುತ್ತದೆ.

ಕಳೆದ ವರ್ಷ, ಬೋಯಿಂಗ್ 20 787 ಡ್ರೀಮ್‌ಲೈನರ್‌ಗಳು, 10 777ಎಕ್ಸ್ ಮತ್ತು 190 737 ಮ್ಯಾಕ್ಸ್ ನ್ಯಾರೋಬಾಡಿ ವಿಮಾನಗಳನ್ನು ಒಳಗೊಂಡಂತೆ 200ಕ್ಕೂ ಹೆಚ್ಚು ಜೆಟ್‌ಗಳಿಗೆ ಬೋಯಿಂಗ್‌ನಿಂದ ಸಂಸ್ಥೆಯ ಆದೇಶಗಳಿಗೆ ಸಹಿ ಹಾಕಿದ ನಂತರ, ಭಾರತದಲ್ಲಿ ಪೈಲಟ್‌ಗಳಿಗೆ ತರಬೇತಿ ನೀಡಲು ಮೂಲಸೌಕರ್ಯ ಮತ್ತು ಕಾರ್ಯಕ್ರಮಗಳಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆಯನ್ನು ಬೋಯಿಂಗ್ ಘೋಷಿಸಿತು.

ಸಂಚಾರ ಮಾರ್ಗ ಬದಲಾವಣೆ: ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಗೊಲ್ಲಹಳ್ಳಿ ಗೇಟ್ ನಿಂದ ಹುನಚೂರುವರೆಗೆ, ಏರ್ ಲೈನ್ಸ್ ಡಾಬಾದಿಂದ ಬೂದಿಗೆರೆಯವರೆಗೆ, ಹೆಣ್ಣೂರು-ಬಗಲೂರು ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣ ರಸ್ತೆಯವರೆಗೆ, ಚಿಕ್ಕಜಾಲ ಕೋಟೆ ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣದವರೆಗೆ, ಬಗಲೂರಿನಿಂದ ವಿಮಾನ ನಿಲ್ದಾಣದವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ವೈಟ್ ಫೀಲ್ಡ್, ಕೆ.ಆರ್. ಪುರಂನಿಂದ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗೊಲ್ಲಹಳ್ಳಿ ಗೇಟ್ ಮಾರ್ಗವಾಗಿ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

ಗೊಲ್ಲಹಳ್ಳಿ ಗೇಟ್-ಬಲದಿರುವು-ಹೊನ್ನಹಳ್ಳಿ ಗೇಟ್-ಬೆಟ್ಟಕೋಟೆ-ಎಲ್‌ಲೈನ್ ಡಾಬಾ-ಎಡತಿರುವು-ದೇವನಹಳ್ಳಿ ಬಸ್ ನಿಲ್ದಾಣ-ಎಡ ತಿರುವು-ದೇವನಹಳ್ಳಿ ಬೈಪಾಸ್-ಎಡ ತಿರುವು-ಬಿ.ಬಿ ರಸ್ತೆ-ದೇವನಹಳ್ಳಿ ಟೋಲ್-ಎಡ ತಿರುವು-ಕೆಂಪೇಗೌಡ ವಿಮಾನ ನಿಲ್ದಾಣ.

2. ರಾಷ್ಟ್ರೀಯ ಹೆದ್ದಾರಿ-648 ಏರ್‌ಲೈನ್ ಡಾಬಾ ಜಂಕ್ಷನ್ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕಡೆಗೆ ಕೆ.ಐ.ಎ.ಡಿ.ಬಿ ಇಂಡಸ್ಟ್ರೀಯಲ್ ಏರಿಯಾ ಸಂಚರಿಸುವ ವಾಹನ ಸಂಚರಿಸಬೇಕಾದ ಮಾರ್ಗಗಳು:

ಏರ್‌ಲೈನ್ಸ್ ಡಾಬಾ-ದೇವನಹಳ್ಳಿ ಬಸ್ ನಿಲ್ದಾಣ-ಎಡತಿರುವು-ದೇವನಹಳ್ಳಿ ಬೈಪಾಸ್-ಎಡ ತಿರುವು-ಬಿ.ಬಿ ರಸ್ತೆ- ದೇವನಹಳ್ಳಿ ಟೋಲ್-ಎಡ ತಿರುವು- ಕೆಂಪೇಗೌಡ ವಿಮಾನ ನಿಲ್ದಾಣ.

3. ಹೆಣ್ಣೂರು-ಬಾಗಲೂರು ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳಮ್ಮ ಸರ್ಕಲ್ ಮಾರ್ಗವಾಗಿ ಸಂಚರಿಸುವ ವಾಹನ ಸಂಚರಿಸಬೇಕಾದ ಮಾರ್ಗಗಳು:

ಬಾಗಲೂರು ಗುಂಡಪ್ಪ ಸರ್ಕಲ್-ಎಡ ತಿರುವು-ರೇವಾ ಕಾಲೇಜು ಜಂಕ್ಷನ್-ಬಾಗಲೂರು ಕ್ರಾಸ್-ಬಲ ತಿರುವು- ಚಿಕ್ಕ ಚಾಲ-ಸಾದಹಳ್ಳಿ ಟೋಲ್ -ಏರ್ ಪೋರ್ಟ ಪ್ರೈ ಓವರ್ ಎಂಟ್ರಿ- ಕೆಂಪೇಗೌಡ ವಿಮಾನ ನಿಲ್ದಾಣ.

4. ಚಿಕ್ಕಜಾಲ ಕೋಟೆ ಕ್ರಾಸ್ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳಮ್ಮ ಸರ್ಕಲ್ ಮಾರ್ಗವಾಗಿ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಚಿಕ್ಕಚಾಲ-ಸಾದಹಳ್ಳಿ ಟೋಲ್ – ಏರ್ ಪೋರ್ಟ ಪ್ರೈ ಓವರ್ ಎಂಟ್ರಿ- ಕೆಂಪೇಗೌಡ ವಿಮಾನ ನಿಲ್ದಾಣ

5. ಬಾಗಲೂರು ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗಾಳನ್ನು ಸರ್ಕಲ್ ಮಾರ್ಗವಾಗಿ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಬಾಗಲೂರು ಕಾಲೋನಿ ಬಲ ತಿರುವು – ರಜಾಕ್ ಪಾಳ್ಯ – ಎಂ.ವಿ.ಐ.ಟಿ ಕಾಲೇಜು – ಚಿಕ್ಕಚಾಲ ಬಲ ತಿರುವು – ಬಿಬಿ ರಸ್ತೆ – ಸಾದಹಳ್ಳಿ ಟೋಲ್- ಏರ್ ಪೋರ್ಟ ಪ್ರೈ ಓವರ್ ಎಂಟ್ರಿ- ಕೆಂಪೇಗೌಡ ವಿಮಾನ ನಿಲ್ದಾಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com