ಬೆಂಗಳೂರು: ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುವ ವೇಳೆ ಸಮಾಜದಲ್ಲಿ ಹಿಂದಿನಿಂದಲೂ ಶೋಷಣೆ ನಡೆಯುತ್ತಲೇ ಇದೆ, ಇದಕ್ಕೆ ಜಾತಿ ವ್ಯವಸ್ಥೆಯೇ ಕಾರಣ. ಈ ಜಾತಿ ವ್ಯವಸ್ಥೆಯಿಂದ ನಿರಂತರವಾಗಿ ಶೋಷಣೆ ನಡೆಯುತ್ತಿದೆ ಎಂದು ಹೇಳುತ್ತಾ ಕೇಂದ್ರ ಬಿಜೆಪಿ ಸರ್ಕಾರ ರಾಷ್ಟ್ರಪತಿ ಶ್ರೀಮತಿ ದ್ರೌಪತಿ ಮುರ್ಮು ಅವರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದ್ದರು.
ರಾಷ್ಟ್ರಪತಿಗಳನ್ನು ಸಂಬೋಧಿಸುವ ವೇಳೆ ಮುಖ್ಯಮಂತ್ರಿಗಳು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ, ವಕೀಲಿಕೆ ನಮ್ಮಪ್ಪನ ಮನೆ ಆಸ್ತಿ ಎಂದು ಜಾಗಟೆ ಹೊಡೆಯುವ ಸಿದ್ದರಾಮಯ್ಯನವರು ಮಾನ, ಮರ್ಯಾದೆ, ಮಹಿಳೆಯರ ಮೇಲೆ ಗೌರವ ಏನಾದರೂ ಇಟ್ಟುಕೊಂಡಿದ್ದರೆ, ಈ ಕ್ಷಣದಲ್ಲಿಯೇ ಸಿಎಂ ಕುರ್ಚಿಯನ್ನು ಖಾಲಿ ಮಾಡಬೇಕು.
ನಿನ್ನೆಯ ದಿನ ಚಾಮರಾಜನಗರದಲ್ಲಿ ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರರವರು ಭಾಷಣ ಮಾಡುತ್ತಿದ್ದಾಗ ಯಾರೋ ಒಬ್ಬರು ಏಕವಚನದಲ್ಲಿ ಪ್ರಶ್ನಿಸಿದರೆಂಬ ಕಾರಣಕ್ಕೆ ಪೊಲೀಸರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಬಂಧಿಸಿ ದರದರನೇ ಎಳೆದುಕೊಂಡು ಹೋದರು. ಹಾಗಿದ್ದರೆ, ರಾಷ್ಟ್ರಪತಿಗಳನ್ನೇ ಏಕವಚನದಲ್ಲಿ ಸಂಬೋಧಿಸಿದ ಈ ಮುಖ್ಯಮಂತ್ರಿಗೇನು ಶಿಕ್ಷೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Advertisement