ನಾಥೂರಾಂ ಗೋಡ್ಸೆ ಭಾರತದ ಮೊಟ್ಟ ಮೊದಲ ಭಯೋತ್ಪಾದಕ: ಬಿ.ಕೆ.ಹರಿಪ್ರಸಾದ್

ನಾಥೂರಾಂ ಗೋಡ್ಸೆ ಭಾರತದ ಮೊದಲ ಭಯೋತ್ಪಾದಕ. ಗೋಡ್ಸೆಯಿಂದಾಗಿ ನಮ್ಮ ದೇಶಕ್ಕೆ ಭಯೋತ್ಪಾದನೆ ಪ್ರವೇಶಿಸಿದೆ. ಪ್ರಪಂಚದಾದ್ಯಂತ 144 ದೇಶಗಳು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸುತ್ತವೆ .
ಬಿ.ಕೆ ಹರಿಪ್ರಸಾದ್
ಬಿ.ಕೆ ಹರಿಪ್ರಸಾದ್

ಮಂಗಳೂರು: ನಾಥೂರಾಂ ಗೋಡ್ಸೆ ಭಾರತದ ಮೊದಲ ಭಯೋತ್ಪಾದಕ. ಗೋಡ್ಸೆಯಿಂದಾಗಿ ನಮ್ಮ ದೇಶಕ್ಕೆ ಭಯೋತ್ಪಾದನೆ ಪ್ರವೇಶಿಸಿದೆ. ಪ್ರಪಂಚದಾದ್ಯಂತ 144 ದೇಶಗಳು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಿಸುತ್ತವೆ ಏಕೆಂದರೆ ಅವರು ಒಂದೇ ಒಂದು ಗುಂಡು ಹಾರಿಸದೆ ಸ್ವಾತಂತ್ರ್ಯವನ್ನು ತಂದರು ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, ಭಾರತದಲ್ಲಿರುವ ಸಾವಿರಾರು ಭಾಷೆ, ಜಾತಿಗಳನ್ನು ಒಂದಾಗಿ ಕೊಂಡೊಯ್ಯಬೇಕಾದರೆ ಯಾವುದಾದರೂ ಒಂದು ದೊಡ್ಡ ತತ್ವ ಅಥವಾ ಸಿದ್ಧಾಂತ ಬೇಕು. ಅದನ್ನೇ ಮಹಾತ್ಮಾ ಗಾಂಧಿಯವರು ಸರ್ವಧರ್ಮ ಸಮಭಾವ ಎಂದು ಕರೆದರು. ಆ ಸಿದ್ಧಾಂತಕ್ಕೋಸ್ಕರ ಪ್ರಾಣವನ್ನು ಬಿಟ್ಟರು.

ನಾನು ಗಾಂಧಿಯವರನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ಉಗ್ರಗಾಮಿ ಎಂದು ಹೇಳಲ್ಲ. ಆತ ಈ ದೇಶದ ಮೊಟ್ಟ ಮೊದಲ ಭಯೋತ್ಪಾದಕ. ಈ ದೇಶದಲ್ಲಿ ಭಯೋತ್ಪಾದನೆ ಆರಂಭವಾಗಿದ್ದೇ ಗೋಡ್ಸೆಯಿಂದ. ಹಿಂದೂ ಧರ್ಮದ ಮೇಲೆ ನಂಬಿಕೆಯಿಟ್ಟಿದ್ದ ಗಾಂಧಿಯನ್ನು ಕೊಂದ ಹಿಂದೂವನ್ನು ಏನೆಂದು ಕರೆಯಬೇಕು ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಇಂದು ಭಯದ, ಬೇಧ - ಪಕ್ಷಪಾತದ ವಾತಾವರಣವನ್ನು ಸೃಷ್ಟಿ ಮಾಡಿರುವ ಪ್ರತಿಗಾಮಿ ಶಕ್ತಿಗಳು, ಉಗ್ರ ಬಲಪಂಥಿಯರನ್ನು ನಾವು ಎದುರಿಸಲು ಮಹಾತ್ಮಾಗಾಂಧಿ ಒಂದೇ ಮಂತ್ರ ಬಳಸಿಕೊಳ್ಳಬೇಕು. ಗಾಂಧಿಯವರನ್ನು ಬಲಪಂಥೀಯ ಉಗ್ರಗಾಮಿಗಳು ಖಳನಾಯಕನಂತೆ ಮಾಡಲು ಹೊರಟಿದ್ದಾರೆ. 1991ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕದಿಂದ ಗುಜರಾತ್‌ನ ಪೋರಬಂದರ್ ಮಾಫಿಯಾದ ನಿಯಂತ್ರಣದಲ್ಲಿದೆ. ಇದು ಸದ್ಯ ದೇಶದಲ್ಲಿನ ಮಹಾತ್ಮಾ ಗಾಂಧಿಯವರ ಸ್ಥಿತಿಯನ್ನು ತೋರಿಸುತ್ತಿದೆ. ಇಲ್ಲಸಲ್ಲದ ಆರೋಪವನ್ನು ವಾಟ್ಸ್ಆ್ಯಪ್ ಯುನಿವರ್ಸಿಟಿ ಮೂಲಕ ಮಾಡುತ್ತಿದ್ದಾರೆ.‌ ಗಾಂಧಿ‌ಚಿಂತನೆ ಎಂದಿಗೆ ಮುಗಿಯುತ್ತೆದೆಯೋ ಅಂದಿಗೆ ಈ ದೇಶವು ಮುಗಿಯುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

ನಾವು ಸನಾತನ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದ್ದೇವೆ ಆದರೆ ನಮಗೆ ಧರ್ಮ ಯಾವುದು ಎಂದು ತೋರಿಸಿಕೊಟ್ಟವರು ಗಾಂಧಿ, ಯಾರನ್ನೂ ಸೋಲಿಸಲು ಗಾಂಧಿ ಹೋರಾಡಲಿಲ್ಲ ಬದಲಾವಣೆ ತರಲು ತಮ್ಮ ಹೋರಾಟ ನಡೆಸಿದ್ದರು. ಗಾಂಧಿ ಕರಾವಳಿ ಕರ್ನಾಟಕಕ್ಕೆ ಮೂರು ಬಾರಿ ಭೇಟಿ ನೀಡಿ ಹಿಂದೂ ಮತ್ತು ಮುಸ್ಲಿಮರಿಗೆ ಏಕತೆಯ ಸಂದೇಶವನ್ನು ನೀಡಿದರು. ಸ್ವಾವಲಂಬಿ ಬದುಕು, ಸ್ವರಾಜ್ಯದ ಕಲ್ಪನೆ, ಅಸ್ಪೃಶ್ಯತೆ ನಿವಾರಣೆ ಬಗ್ಗೆ ಉಪದೇಶ ನೀಡಿದ್ದರು.

ಮಂಡ್ಯದ ಕೆರೆಗೋಡು ಎಂಬಲ್ಲಿ ಬಿಜೆಪಿ ರಾಷ್ಟ್ರಧ್ವಜದ ಜಾಗದಲ್ಲಿ ಭಗವಾ ಧ್ವಜಾರೋಹಣ ಮಾಡುವ ಮೂಲಕ ಶಾಂತಿ ಕದಡುತ್ತಿದೆ ಎಂದು ಆರೋಪಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಗದೀಶ್ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆಯಾದ  ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶೆಟ್ಟರ್ ಒಬ್ಬ ಸಜ್ಜನ ವ್ಯಕ್ತಿಯಾಗಿದ್ದು, ಅವರು ಕಾಂಗ್ರೆಸ್ ಪಕ್ಷದಲ್ಲಿ ಉಳಿಯಬೇಕಿತ್ತು, ಆದರೆ ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸಿದರು.

ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಹರಿಪ್ರಸಾದ್, ಅಶೋಕ್ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ.  ಆದರೆ, ಆ ಹುದ್ದೆಗೆ ಅವರ ಪಕ್ಷದಲ್ಲಿ ಉದ್ದನೆಯ ಸರತಿ ಇದೆ ಮತ್ತು ಅವರ ಕನಸು ಈಡೇರುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com