
ಬೆಂಗಳೂರು: ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಮೂಲಸೌಕರ್ಯಕ್ಕೆ ಭಾರಿ ಪೆಟ್ಟು ಬಿದ್ದಿದ್ದು, ಪುನಶ್ಚೇತನ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕರ್ನಾಟಕ ಗಣಿ ಮತ್ತು ಪರಿಸರ ಪುನಶ್ಚೇತನ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ನಾಲ್ಕು ಜಿಲ್ಲೆಗಳಲ್ಲಿ ಗಣಿಗಾರಿಕೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರಿಸ್ಟೋರೇಶನ್ ಕಾರ್ಪೊರೇಷನ್ - ಮೈನಿಂಗ್ ಇಂಪ್ಯಾಕ್ಟ್ ಝೋನ್ನ ಸಮಗ್ರ ಪರಿಸರ ಯೋಜನೆಯಡಿ 24,996.30 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಅವರು ಪುನಶ್ಚೇತನ ಯೋಜನೆಗಳ ಮೇಲ್ವಿಚಾರಣೆ ನಡೆಸುತ್ತಿದ್ದು, 7,928.78 ಕೋಟಿ ರೂಪಾಯಿ ವೆಚ್ಚವನ್ನು ಒಳಗೊಂಡಿರುವ 358 ಕಾಮಗಾರಿಗಳಿಗೆ ಅಗತ್ಯ ಅನುಮೋದನೆಗಳು ದೊರೆತಿವೆ. ಅವುಗಳಲ್ಲಿ 182 ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುಮತಿ ನೀಡಲಾಗಿದೆ, 135 ಟೆಂಡರ್ಗಳನ್ನು ಕರೆಯಲಾಗಿದೆ, 47 ವರ್ಕ್ ಆರ್ಡರ್ಗಳನ್ನು ನೀಡಲಾಗಿದೆ ಮತ್ತು 23 ಯೋಜನೆಗಳನ್ನು ವಿವಿಧ ಏಜೆನ್ಸಿಗಳಿಗೆ ವಹಿಸಲಾಗಿದೆ. ಒಂದು ವಾರದೊಳಗೆ ವಿವರವಾದ ಯೋಜನಾ ವರದಿಯನ್ನು ಪೂರ್ಣಗೊಳಿಸಬೇಕು ಮತ್ತು ಯೋಜನೆಗಳ ಸಕಾಲಿಕ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಲಾಖೆಗಳಲ್ಲಿ ಯೋಜನಾ ಮೇಲ್ವಿಚಾರಣಾ ಘಟಕಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸೂಚನೆ ನೀಡಿ ಒಂದು ವರ್ಷ ಕಳೆದರೂ ಡಿಪಿಆರ್ ಸಿದ್ಧಪಡಿಸಿಲ್ಲ ಎಂದು ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡರು.
ಒಂದು ವರ್ಷದಿಂದ ಕಡತಗಳ ಮೇಲೆಯೇ ಕುಳಿತಿರುವ ಅಧಿಕಾರಿಗಳು ವಾರದಲ್ಲಿ ಡಿಪಿಆರ್ ಪೂರ್ಣಗೊಳಿಸುವುದು ಹೇಗೆ ಎಂದು ಮಾಜಿ ಗಣಿ ಸಚಿವ ಹಾಲಪ್ಪ ಆಚಾರ್ ಆಶ್ಚರ್ಯ ವ್ಯಕ್ತಪಡಿಸಿದರು. ರೈಲ್ವೆ (ರೂ. 5,271 ಕೋಟಿ), ಕುಡಿಯುವ ನೀರು (ರೂ. 4,929 ಕೋಟಿ), ಆರೋಗ್ಯ ಕ್ಷೇತ್ರ (ರೂ. 1,915 ಕೋಟಿ), ಪರಿಸರ ಪುನಶ್ಚೇತನ (ರೂ. 2,655 ಕೋಟಿ), ರಸ್ತೆಗಳು ಮತ್ತು ಸಂವಹನ (ರೂ. 2,559 ಕೋಟಿ) ಮತ್ತು ವಸತಿ 1193.98 ರೂ. ಕೋಟಿ. ನಿಗದಿ ಪಡಿಸಲಾಗಿದೆ.
ವಸತಿ ಯೋಜನೆಯಡಿ ಫಲಾನುಭವಿಗಳನ್ನು ಶೀಘ್ರ ಗುರುತಿಸುವಂತೆ ಸಿದ್ದರಾಮಯ್ಯ ಸೂಚಿಸಿದರು. 14 ಸಣ್ಣ ನೀರಾವರಿ ಯೋಜನೆಗಳ ಪೈಕಿ ಏಳರಲ್ಲಿ ಕಾಮಗಾರಿ ಆರಂಭವಾಗಿದ್ದು, ಉಳಿದ ಏಳಕ್ಕೆ ಶೀಘ್ರವೇ ಟೆಂಡರ್ ಕರೆಯಬೇಕು ಎಂದರು. ಶಾಲಾ ಕಟ್ಟಡಗಳ ದುರಸ್ತಿ ಕುರಿತು ಅಧಿಕಾರಿಗಳು ಗ್ರಂಥಾಲಯಗಳು, ಪ್ರಯೋಗಾಲಯಗಳು ಮತ್ತು ಇತರ ಸೌಲಭ್ಯಗಳನ್ನು ನಿರ್ಮಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹಾಸ್ಟೆಲ್, ಅಂಗನವಾಡಿ ಮತ್ತಿತರ ಕಡೆ ಒತ್ತು ನೀಡಬೇಕು. ನಾಲ್ಕು ಜಿಲ್ಲೆಗಳಿಗೆ ಮೀಸಲಿಟ್ಟಿರುವ ವಿಶೇಷ ಅನುದಾನವನ್ನು ಸದುಪಯೋಗಪಡಿಸಿಕೊಂಡು ಇತರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಅಭಿವೃದ್ಧಿ ಆಯುಕ್ತರಿಗೆ ತಿಳಿಸಿದರು.
Advertisement