
ಬೆಂಗಳೂರು: ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ಶುಕ್ರವಾರ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್ ಮಾನಸ (Blind Football Indian team Captain Manasa) ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವರ ದರ್ಶನಕ್ಕೆಂದು ತೆರಳಿ ಮರಳುವ ವೇಳೆ ಒಂದೇ ಕುಟುಂಬದ 13 ಮಂದಿ ಮೃತಪಟ್ಟಿದ್ದಾರೆ. ನಿಂತಿದ್ದ ಟ್ರಕ್ ಗೆ ಟಿಟಿ ಅಪ್ಪಳಿಸಿದ ಪರಿಣಾಮ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಸದಸ್ಯರು ದಾರುಣ ಸಾವು ಕಂಡಿದ್ದಾರೆ. ಈ ಸಾವಿನಿಂದಾಗಿ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಮೃತಪಟ್ಟ 13 ಮಂದಿಯಲ್ಲಿ ಭಾರತದ ದೃಷ್ಟಿಚೇತನರ ಮಹಿಳಾ ಫುಟ್ಬಾಲ್ ತಂಡದ ಕ್ಯಾಪ್ಟನ್ 24 ವರ್ಷದ ಮಾನಸ ಕೂಡ ಒಬ್ಬರು. ಅಂಧೆಯಾದರೂ ಸಾಧನೆಯಿಂದ ಎಎಸ್ಸಿ ಪದವಿ ಮಾಡಿದ್ದ ಮಾನಸ ಅಂಧರ ಪುಟ್ ಬಾಲ್ ನಲ್ಲಿ ಭಾರತ ಕ್ಯಾಪ್ಟನ್ ಆಗಿದ್ದರು. ಹಲವು ಪಂದ್ಯಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು.
ಬ್ರೈನ್ ಲಿಪಿ (Brain Script) ಮೂಲಕ ಎಎಸ್ಪಿ ಮಾಡಿದ ಭದ್ರಾವತಿಯ ಮೊದಲ ಯುವತಿ ಮಾನಸ ಐಎಎಸ್ ಕನಸು ಕಂಡಿದ್ದರು. ಮಾನಸ ಅದಕ್ಕಾಗಿ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದರು. ಐಎಎಸ್ ತನ್ನ ಪರಮ ಗುರಿ ಎಂದುಕೊಂಡಿದ್ದ ಮಾನಸ ದೇವರ ಬಳಿ ಆಶಿರ್ವಾದ ಪಡೆಯಲೆಂದು ಕುಟುಂಬಸ್ಥರೊಂದಿಗೆ ಹೋಗಿದ್ದರು ಎಂದು ಅವರ ಸಮೀಪ ಬಂಧುಗಳು ಹೇಳುತ್ತಾರೆ. ಅವರ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.
ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
Advertisement